ಬೆಂಗಳೂರು :ಕೋಳಿನೇ ಹುಟ್ಟದೆ ರೋಷನ್ ಬೇಗ್ ಕಬಾಬ್ ಬೇಯಿಸೋದಕ್ಕೆ ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರ ಕಾಲೆಳೆದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೋಷನ್ ಬೇಗ್ ಅವರಿಗೆ ಮತಗಟ್ಟೆ ಸಮೀಕ್ಷೆ ಬಗ್ಗೆನೇ ಇಷ್ಟೊಂದು ಆತುರ ಏಕೆ? 23ರ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡುತ್ತದೆ. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಇಂದು ಪಕ್ಷದ ವಿರುದ್ಧ ಅವರು ಮಾತನಾಡಿದ್ದಾರೆ. ರೋಷನ್ ಬೇಗ್ ಆತುರ ಅರ್ಥ ಆಗ್ತಿಲ್ಲ. ಕೋಳಿನೇ ಹುಟ್ಟಿಲ್ಲ, ಈಗಲೇ ಕಬಾಬ್ ತಿನ್ನೋಕೆ ಹೋಗ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತರು ಅಂದ್ರೇ ಅವರೊಬ್ಬರೇ ಅಲ್ಲ. ಅವರಿಗೆ ಸಚಿವ ಸ್ಥಾನ ಕೊಡದಿರುವುದು ಅಲ್ಪಸಂಖ್ಯಾತರಿಗೆ ಆದ ಮೋಸಾನಾ? ಬೇರೆಯವರಿಗೆ ಟಿಕೆಟ್ ಕೊಟ್ರೇ ಅದು ಅಲ್ಪಸಂಖ್ಯಾತರಿಗೆ ಮಾಡಿದ ಮೋಸಾನಾ? ಇವರನ್ನ ಸಚಿವರನ್ನಾಗಿ ಮಾಡದೇ ಬೇರೆಯವರನ್ನು ಸಚಿವರನ್ನಾಗಿ ಮಾಡಿದ್ರೇ ಅಲ್ಪಸಂಖ್ಯಾತರಿಗೆ ಮಾಡುವ ಮೋಸಾನಾ? ಅವರ ಹಿರಿತನಕ್ಕೆ ಎಗ್ಸಿಟ್ ಪೋಲ್ ನೋಡಿ ರಿಯಾಕ್ಟ್ ಮಾಡೋದಲ್ಲ. ಅವರು ತಾಳ್ಮೆಯಿಂದ ಇರಬೇಕಿತ್ತು. ಅವರು ಪ್ರತಿಕ್ರಿಯಿಸಿದ್ದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿತಾರೆ ಎಂದು ತಿಳಿಸಿದರು.
ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ ದಿನೇಶ್ ಗುಂಡೂರಾವ್, ಆಯ್ತು ಇದು ಮುಗಿದ ಅಧ್ಯಾಯ ಅಂತಾ ಕೋಪಿಸಿಕೊಂಡರು.
ರೋಷನ್ ಬೇಗ್ ಒಬ್ಬ ಹಿರಿಯ ನಾಯಕ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಅವರು ಏನೇ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲೇ ಮಾತನಾಡಬಹುದಿತ್ತು. ಒಬ್ಬ ಪ್ರಬುದ್ಧ ರಾಜಕಾರಣಿ ಈ ರೀತಿ ಮಾತನಾಡುವುದಿಲ್ಲ. ಅವರ ಮಾತಿನ ಹಿಂದಿನ ಉದ್ದೇಶ ಏನಿತ್ತೋ ನನಗೆ ಅರ್ಥ ಆಗ್ತಿಲ್ಲ. ಎಲ್ಲಾ ಅಧಿಕಾರವನ್ನೂ ಅನುಭವಿಸಿದವರು, ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಿರಲಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶ ರೋಷನ್ ಬೇಗ್ಗೆ ಖುಷಿ ತಂದಿರಬೇಕು ಎಂದು ದಿನೇಶ್ ಕಿಡಿಕಾರಿದರು.