ಕರ್ನಾಟಕ

karnataka

ಬೆಂಗಳೂರಲ್ಲಿ ಯುವತಿ ಹತ್ಯೆ ಮಾಡಿ ಮನೆ ಎದುರು ಎಸೆದ ಪ್ರಕರಣ: ಪಕ್ಕದ ಮನೆಯಲ್ಲೇ ಇದ್ದ ಆರೋಪಿ ಬಂಧನ

By

Published : Aug 12, 2023, 9:28 AM IST

Updated : Aug 12, 2023, 10:05 AM IST

Bengaluru Murder Case: ಮನೆ ಮುಂದೆ ಯುವತಿ ಶವವಾಗಿ ಪತ್ತೆಯಾದ ಪ್ರಕರಣ ಸಂಬಂಧ ಕೊಲೆ ಮಾಡಿದ್ದ ಆರೋಪಿಯನ್ನು ಮಹದೇವಪುರ​ ಠಾಣೆ ಪೊಲೀಸರು ಬಂಧಿಸಿದ್ದಾರೆ.

crime-accused-arrested-in-bengaluru-young-woman-murder-case
ಯುವತಿ ಹತ್ಯೆಗೈದು ಮನೆ ಎದುರು ಶವ ಎಸೆದ ಪ್ರಕರಣ: ಪಕ್ಕದ ಮನೆಯಲ್ಲೇ ಇದ್ದ ಆರೋಪಿ ಬಂಧನ

ಬೆಂಗಳೂರು:ಮಹದೇವಪುರ ಪೊಲೀಸ್​ ಠಾಣಾ ವ್ಯಾಪ್ತಿಯ ಮಹೇಶ್ವರಿನಗರದಲ್ಲಿ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದ ಕೊಲೆ ಪ್ರಕರಣವನ್ನು ಕೆಲ ಗಂಟೆಗಳಲ್ಲೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ‌. 21 ವರ್ಷದ ಯುವತಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಆರೋಪದ ಮೇಲೆ ಆಕೆಯ ಪಕ್ಕದ‌ ಮನೆಯಲ್ಲೇ ವಾಸವಿದ್ದ ಕೃಷ್ಣ ಚಂದ್ ಸೇಟಿ ಎಂಬಾತನನ್ನು ಬಂಧಿಸಲಾಗಿದೆ.

ಧೂಳಿಲ್ಲದ ಪಾದ ಕೊಟ್ಟ ಸುಳಿವು:ಗುರುವಾರ ರಾತ್ರಿ ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ಅಕ್ಕ ಮಹದೇವಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು. ಆದರೆ, ಶುಕ್ರವಾರ ಬೆಳಗಿನಜಾವ ಐದು ಗಂಟೆ ಸುಮಾರಿಗೆ ಆಕೆ ವಾಸವಿದ್ದ ಮನೆ ಮುಂದೆಯೇ ಯುವತಿಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹದ ಪಾದದಲ್ಲಿ ಧೂಳು ಇಲ್ಲದಿರುವುದನ್ನನ್ನು ಕಂಡು ಅನುಮಾನಗೊಂಡಿದ್ದರು. ರಾತ್ರಿ ನಾಪತ್ತೆ ಎನ್ನಲಾದ ಯುವತಿಯ ಪಾದಗಳನ್ನು ನೋಡಿದಾಗ ಆಕೆ ಎಲ್ಲಿಯೂ ಹೊರಗಡೆ ಹೋಗಿಲ್ಲ ಎನ್ನುವುದು ಖಚಿತವಾಗಿತ್ತು. ಆದ್ದರಿಂದ ಆಕೆಯ ಮನೆಯ ಅಕ್ಕಪಕ್ಕದಲ್ಲಿಯೇ ಹಂತಕ ಇರಬಹುದು ಎಂಬ ಶಂಕೆ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ವೇಳೆ ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಕಲೆ ಹಾಕಿದಾಗ, ಯುವತಿಯು ತನ್ನ ಪಕ್ಕದ ಮನೆಯಲ್ಲಿಯೇ ಇದ್ದ ಕೃಷ್ಣ ಚಂದ್ ಸೇಟಿಯ ಮನೆಯತ್ತ ಹೋಗಿರುವುದನ್ನು ಕಂಡಿರುವುದಾಗಿ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಅಲ್ಲದೇ, ಶವ ಪತ್ತೆಯಾಗಿ ಹಲವು ಗಂಟೆಗಳ ಕಾಲ ಮನೆಯಿಂದ ಹೊರಗಡೆ ಬಂದಿರದ ಕೃಷ್ಣ ಚಂದ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನೇ ಕೊಲೆ ಮಾಡಿರುವ ವಿಚಾರ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕತ್ತು ಹಿಸುಕಿ ಯುವತಿ ಕೊಲೆ:ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ನಗರದ ಟೆಕ್ ಪಾರ್ಕ್​ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಅಡುಗೆ ಮನೆಯಲ್ಲಿ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಕೃಷ್ಣ ಚಂದ್​ನ ಮನೆಯ ಬಾಗಿಲಿನ ಬಳಿ ಯುವತಿ ಬಂದಾಗ ಅರೋಪಿಯು ಆಕೆಯನ್ನು ಒಳಗಡೆ ಎಳೆದುಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ, ಬಲವಂತವಾಗಿ ಚುಂಬಿಸಲು ಮುಂದಾಗಿದ್ದಾನೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

ಈ ವೇಳೆ, ಯುವತಿಯು ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಭಯಗೊಂಡ ಆರೋಪಿಯು ಆಕೆಯ ಹಿಂಬದಿಯಿಂದ ಮೂಗು, ಬಾಯಿ ಒಂದು ಕೈನಲ್ಲಿ ಮುಚ್ಚಿ ಹಿಡಿದು, ಮತ್ತೊಂದು ಕೈನಿಂದ ಆಕೆಯ ಕತ್ತು ಹಿಸುಕಿದ್ದಾನೆ. ಯುವತಿಯು ಕಿರುಚಾಡಲೂ ಸಾಧ್ಯವಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಹತ್ಯೆಯ ಬಳಿಕ ಮೃತದೇಹವನ್ನು ಮನೆಯಲ್ಲೇ ಬೆಡ್​​ಶೀಟ್​​ ಸುತ್ತಿ ಡ್ರಮ್​​ನಲ್ಲಿ ಇಟ್ಟಿದ್ದ ಕೃಷ್ಣ ಚಂದ್, ಶುಕ್ರವಾರ ಮುಂಜಾನೆ ಸಮಯದಲ್ಲಿ ಆಕೆಯ ಮನೆಯ ಮುಂದೆ ಬಿಸಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಅರೋಪಿ ಕೃಷ್ಣನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಹದೇವಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ರಾತ್ರಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಬೆಳಗ್ಗೆ ಮನೆ ಮುಂದೆ ಪತ್ತೆ

Last Updated : Aug 12, 2023, 10:05 AM IST

ABOUT THE AUTHOR

...view details