ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನಿ ನೀರಾವರಿ ಯೋಜನೆಯಲ್ಲಿ 1500 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಅವರದೇ ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಮೂರು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಗ್ಗಾಂವಿ ಕ್ಷೇತ್ರದಲ್ಲಿ ಹಣ ಲೂಟಿ ಮಾಡಿದ್ದು, ಯಾವುದೇ ರೈತರು ಈ ಹನಿ ನೀರಾವರಿ ಯೋಜನೆಯ ಲಾಭ ಪಡೆದಿಲ್ಲ. ಇದೆಲ್ಲವೂ ನಮ್ಮ ಆರೋಪವಲ್ಲ, ಬಿಜೆಪಿ ನಾಯಕರು ಕಾರ್ಯಕರ್ತರ ಆರೋಪವಾಗಿದೆ ಎಂದು ತಿಳಿಸಿದರು.
ರಾಜ್ಯಪಾಲ ಬಿಜೆಪಿ ನಾಯಕ ಸತ್ಯಪಾಲ್ ಸಿಂಗ್ ಅವರು, ಪ್ರಧಾನಮಂತ್ರಿಗಳು ಭ್ರಷ್ಟಾಚಾರವನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ನೆಹರೂ ಓಲೇಕರ್ ಅವರು ಬೊಮ್ಮಾಯಿ ಅವರು 40% ಕಮಿಷನ್ ಏಜೆಂಟ್ ಎಂದು ಹೇಳಿದ್ದಾರೆ. ಈ ಎಲ್ಲರ ಹೇಳಿಕೆಗಳ ವಿಡಿಯೋ ತುಣುಕುಗಳನ್ನು ಗೌರವ್ ವಲ್ಲಭ್ ಈ ವೇಳೆ ಪ್ರದರ್ಶಿಸಿದರು.
ಚುನಾವಣಾ ಆಯೋಗ ಏನು ಮಾಡುತ್ತಿದೆ. 1500 ಕೋಟಿ ರೂ. ಹೇಗೆ ದುರುಪಯೋಗವಾಯಿತು. ಈ ಹಣ ಸಣ್ಣ ಅಮೌಂಟ್ ಅಲ್ಲ. ರೈತರು ಯಾವ ಸೌಲಭ್ಯವನ್ನು ಪಡೆದಿಲ್ಲ. ರೈತರ ಹೆಸರಿನಲ್ಲಿ ಬೊಮ್ಮಾಯಿ ಅವರು ಹಣ ಲೂಟಿ ಮಾಡಿದ್ದಾರೆ. ಈಗಾಗಲೇ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಈ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದರು.
1. ಈ ಆರೋಪ ಕೇಳಿಬಂದ ನಂತರವೂ ಬಸವರಾಜ ಬೊಮ್ಮಾಯಿ ಅವರಾಗಲಿ, ಬಿಜೆಪಿ ಪಕ್ಷ ಮೌನವಾಗಿರುವುದೇಕೆ?. ಅವರ ಮೌನ ಸಮ್ಮತಿ ಎಂದು ಭಾವಿಸಬಹುದೇ? ಈ ಆರೋಪ ಸುಳ್ಳಾಗಿದ್ದರೆ ಆರೋಪ ಮಾಡಿರುವ ಬಿಜೆಪಿ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಯಾಕಿಲ್ಲ? ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸಿದರೆ, ನೆಹರೂ ಓಲೇಕಾರ್ ಅವರು ಈ ಆರೋಪದ ಸಾಕ್ಷಿ ಒದಗಿಸುತ್ತಾರೆ ಎಂಬ ಭಯವೇ? ಎಂದು ಪ್ರಶ್ನಿಸಿದರು.