ಕರ್ನಾಟಕ

karnataka

By

Published : Dec 10, 2020, 1:45 PM IST

ETV Bharat / state

ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್ ಅಡಗಿ ಕುಳಿತಿದೆ: ಹೆಚ್‌ಡಿಕೆ

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು. ನಿತ್ಯವೂ ಆತ್ಮಹತ್ಯೆಗಳು ವರದಿಯಾಗುತ್ತಿದ್ದವು. ಆಗ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸಂಕಷ್ಟದಲ್ಲಿದ್ದ ರೈತರಿಗೆ ಕೈಲಾದಷ್ಟು ನೆರವು ನೀಡಿ, ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ನಾನು ಮಾಡಿದ್ದೆ. ಆಗ ಈ ರೈತ ನಾಯಕರು ಎಲ್ಲಿದ್ದರು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

Kumaraswamy
ಕುಮಾರಸ್ವಾಮಿ

ಬೆಂಗಳೂರು: 2013-14ರ ಕಾಲ. ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ರಾಮನಗರ, ಮಂಡ್ಯದಲ್ಲಿ ರೋಗದ ರುದ್ರ ನರ್ತನ. ಸರ್ಕಾರ ಸುಮ್ಮನಿತ್ತು. ಆಗ ಚನ್ನಪಟ್ಟಣ, ರಾಮನಗರ, ಕನಕಪುರ, ಮಂಡ್ಯದಲ್ಲಿ ಪ್ರತಿ ಕುಟುಂಬಕ್ಕೆ 25 ಸಾವಿರ ರೂ. ನೆರವು ವೈಯಕ್ತಿವಾಗಿ ನೀಡಿದ್ದೆ. ಆಗ ಈ ರೈತ ನಾಯಕರು ಎಲ್ಲಿದ್ದರು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ‌ಮಾಡಿರುವ ಅವರು, ಮಹದಾಯಿಗಾಗಿ ಯಮನೂರಿನಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾಂಗ್ರೆಸ್ ಸರ್ಕಾರ ಹಲ್ಲೆ ಮಾಡಿತ್ತು. ಆ ದಾಳಿಯನ್ನು ರೈತರು ಇಂದೂ ಮರೆತಿಲ್ಲ ಎಂದು ಇತ್ತೀಚೆಗೆ ಪತ್ರಿಕೆಗಳೂ ವರದಿ ಮಾಡಿವೆ. ಅಂದು ಯಮನೂರಿಗೆ ಧಾವಿಸಿ ರೈತರಿಗೆ ಸಾಂತ್ವನ ಹೇಳಿದ್ದು ನಾನು. ಸರ್ಕಾರ ರೈತರ ಮೇಲೆ ದಾಳಿ ನಡೆಸುತ್ತಿದ್ದಾಗ ಈ ರೈತ ನಾಯಕರು ಎಲ್ಲಿದ್ದರು? ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು. ನಿತ್ಯವೂ ಆತ್ಮಹತ್ಯೆಗಳು ವರದಿಯಾಗುತ್ತಿದ್ದವು. ಆಗ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸಂಕಷ್ಟದಲ್ಲಿದ್ದ ರೈತರಿಗೆ ಕೈಲಾದಷ್ಟು ನೆರವು ನೀಡಿ, ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ನಾನು ಮಾಡಿದ್ದೆ. ಆಗ ಈ ರೈತ ನಾಯಕರು ಎಲ್ಲಿದ್ದರು? ಎಂದು ಪ್ರಶ್ನಿಸಿದ್ದಾರೆ.

ರೈತರ 25 ಸಾವಿರ ಕೋಟಿ ರೂ. ಮೊತ್ತದ ಸಾಲಮನ್ನಾ ಮಾಡುವಾಗ ರೈತ ಸಂಘಗಗಳ ಬಳಿ ಏನಾದರೂ ಕಮಿಷನ್‌ ಪಡೆದೆನೇ? ಕೆಲ ರೈತ ನಾಯಕರ ಬಾಯಲ್ಲಿ ಬರುತ್ತಿರುವ 'ಕಿಕ್‌ಬ್ಯಾಕ್‌' ಏನಾದರೂ ಪಡೆದೆನೇ? ರೈತ ನಾಯಕರು ಎನಿಸಿಕೊಂಡವರಿಗೆ ಸಾಲಮನ್ನಾ ವಿಚಾರವಾಗಿ ನನ್ನ ಕಡೆಗೆ ಕೃತಜ್ಞತೆ ಇದೆಯೇ? ರೈತರು ಸಾಲದ ಸುಳಿಯಲ್ಲಿದ್ದಾಗ ಈ ರೈತ ನಾಯಕರು ಎಲ್ಲಿದ್ದರು?. ರೈತರಿಗಾಗಿ ಇಂಥಹ ಹಲವು ಕಾರ್ಯಕ್ರಮಗಳನ್ನು ನಾನು ಸ್ವಯಂ ಪ್ರೇರಣೆಯಿಂದ ಮಾಡಿದ್ದೇನೆ. ಇವತ್ತು ನನ್ನ ವಿರುದ್ಧ ಅರಚುತ್ತಿರುವ ಇದೇ ರೈತ ನಾಯಕರೇನಾದರೂ ರೈತರ ಸಾಲಮನ್ನಾಕ್ಕಾಗಿ ನನ್ನ ಬಳಿ ಅರ್ಜಿ ಕೊಟ್ಟಿದ್ದರೇ? ಸಾಲಮನ್ನ ನನ್ನ ಕಾರ್ಯಕ್ರಮ. ಇಷ್ಟಾದರೂ 8 ಕೋಟಿ ಕಿಕ್‌ ಬ್ಯಾಕ್‌ ಪಡೆದ ಆರೋಪ ಮಾಡಿರುವ ಆ ನಾಯಕರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ರೈತರಿಗೆ ಸ್ಪಂದಿಸುವ ಪಕ್ಷವೇನಾದರೂ ಇದ್ದರೆ ಅದು ಜೆಡಿಎಸ್‌ ಮಾತ್ರ. ನೀರಾವರಿ, ಕೃಷಿ, ರೈತರ ಆರ್ಥಿಕ ಸಬಲೀಕರಣಕ್ಕೆ ರಾಜ್ಯದಲ್ಲಿ ಏನಾದರೂ ಒಳ್ಳೆಯದಾಗಿದ್ದರೆ ಅದು ಜೆಡಿಎಸ್​ನಿಂದ ಮಾತ್ರ. ಜೆಡಿಎಸ್‌ ರಾಜಕೀಯ ಪಕ್ಷ ಮಾತ್ರವಲ್ಲ. ಅದು ರೈತರಿಗಾಗಿ ಹೋರಾಡುವ ರೈತ ಸಂಘವೂ ಹೌದು ಎಂಬುದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಇವತ್ತಿನ ಕೆಲ ರೈತ ಸಂಘಗಳು ರೈತರಿಗಾಗಿ ಹೋರಾಡುವುದನ್ನು ಬಿಟ್ಟು ಕಾಂಗ್ರೆಸ್‌ನಂಥ ಸಮಾಜವನ್ನು ಒಡೆಯುವ, ಜನರ ಆಶಯಗಳಿಗೆ ವಿರುದ್ಧವಾದ ಚಿಂತನೆಗಳನ್ನು ಹೊಂದಿರುವ ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ. ಭೂ ಸುಧಾರಣೆ ಕಾಯ್ದೆ ವಿಚಾರವಾಗಿ ಅನಗತ್ಯ ಹೋರಾಟ ನಡೆಸುತ್ತಿರುವ ಕೆಲ ರೈತ ಸಂಘಗಳ ಹಿಂದೆ ಕಾಂಗ್ರೆಸ್‌ ತೆರೆಮರೆಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೆಡಿಎಸ್‌ ವಿರುದ್ಧ ತನ್ನ ಹೋರಾಟಗಳನ್ನು ರೂಪಿಸುತ್ತಿದೆ. ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್‌ ಈಗ ಅಡಗಿ ಕುಳಿತಿದೆ. ಅವರ ಮೂಲಕ ರಾಜಕೀಯದ ಹೇಳಿಕೆಗಳನ್ನು ಕೊಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್‌ ರೈತ ಸಂಘಗಳನ್ನೂ ಒಡೆಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಹೆಚ್​ಡಿಕೆ ದೂರಿದ್ದಾರೆ.

ABOUT THE AUTHOR

...view details