ಬೆಂಗಳೂರು: ಎಎಸ್ಐ ಲಂಚಾವತಾರದ ಬಗ್ಗೆ ಗುರುತರ ಆರೋಪ ಮಾಡಿದ್ದ ಭರತ್ ಶೆಟ್ಟಿ ವಿರುದ್ಧವೇ ದೂರು ದಾಖಲಾಗಿದ್ದು, ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಲು ಯತ್ನಿಸಿದ ಆರೋಪದಡಿ ದೂರು ದಾಖಲಾಗಿದೆ.
ಶ್ರೀನಿವಾಸ್ ಮೂರ್ತಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭರತ್ ಶೆಟ್ಟಿ ತನ್ನದೆಂದು ಬೋರ್ಡ್ ಹಾಕಿಕೊಂಡಿದ್ದನಂತೆ. ಅಲ್ಲದೇ, ಶ್ರೀನಿವಾಸ್ ಮೂರ್ತಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಎಲ್ಲ ದಾಖಲಾತಿಗಳು ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಹೋಗಿ ಈಗ ಭರತ್ಶೆಟ್ಟಿ ಸಿಕ್ಕಿ ಬಿದಿದ್ದಾನೆ ಎನ್ನಲಾಗಿದೆ.
ಘಟನೆ ವಿವರ:
ಶ್ರೀನಿವಾಸ್ ಮೂರ್ತಿ ನಗರದ ಹೊರವಲಯದ ಚಿಕ್ಕಬೊಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 16/1 ರಲ್ಲಿ 0.10 ಗುಂಟೆ ಜಮೀನನ್ನು ಪಿರ್ಯಾದುದಾರರ ಹೆಸರಿಗೆ ದಿನಾಂಕ: 20/08/1991 ರಂದು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಜೊತೆಗೆ ದಿನಾಂಕ 10/12/1991 ರಂದು ಜಿಪಿಎ ಮತ್ತು ಪ್ರಮಾಣ ಪತ್ರ ಸಹ ಆಗಿದೆ. ಹೀಗಿರುವಾಗ ಶ್ರೀನಿವಾಸ್ ಮೂರ್ತಿ ಜಮೀನನ್ನು ಕಬಳಿಸಲು ಯಲಹಂಕ ಉಪನಗರದ ವಾಸಿಯಾದ ಭರತ್ ಶೆಟ್ಟಿ ಸಂಚು ರೂಪಿಸಿದ್ದನಂತೆ.