ಕರ್ನಾಟಕ

karnataka

By

Published : Sep 16, 2022, 2:16 PM IST

Updated : Sep 16, 2022, 2:30 PM IST

ETV Bharat / state

ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಬದ್ಧ, ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಶ್ರೀರಾಮುಲು

ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆ ಕಳೆದ ನಾಲ್ಕು ವರ್ಷದಿಂದ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಸಚಿವ ಶ್ರೀರಾಮುಲು ಉತ್ತರಿಸಿದರು. ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆ ಕಳೆದ ನಾಲ್ಕು ವರ್ಷದಿಂದ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಹೇಳಿದರು.

ವೇತನ ಪರಿಷ್ಕರಣೆ ಚಿಂತನೆ:ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. 2020-21 ರಲ್ಲಿ ಬಹಳ ಜನ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆ ಇರಿಸಿ ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು.

ಸಾರಿಗೆ ಸಚಿವ ಬಿ ಶ್ರೀರಾಮುಲು

ಕಳೆದ ಎರಡು ವರ್ಷದಲ್ಲಿ ನಮಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಲಾಗಲಿಲ್ಲ, ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ಹಣ ಡೀಸೆಲ್​ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದೆ. ಆದರೂ ಸಿಎಂ ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ.

ಸಿಎಂ ಜೊತೆ ಚರ್ಚಿಸಿ ತೀರ್ಮಾನ: ನಾಲ್ಕು ನಿಗಮ ಲಾಭಕ್ಕೆ ಬರಲು ಪೂರಕವಾಗಿ ವರದಿ ನೀಡಲು ರಚಿಸಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿ ಈಗಾಗಲೇ ಬಂದಿದೆ. ಎಲ್ಲವನ್ನೂ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನದಲ್ಲಿ ಸಿಎಂ ಜೊತೆ ಚರ್ಚಿಸಿ ವೇತನ ಪರಿಷ್ಕರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ.

ಹೈಭೀಮ್ ಲೈಟ್ ಬಳಸಿದಲ್ಲಿ ದಂಡ, ಕೇಸ್ ಬುಕ್: ಯಾವುದೇ ಮಾದರಿಯ ವಾಹನಗಳಲ್ಲಿನ ಹೆಡ್ ಲೈಟ್​ಗಳಲ್ಲಿ ಹೈ ಭೀಮ್ ಹಾಕಿ ವಾಹನ ಚಾಲನೆ ಮಾಡಿದರೆ ದಂಡ ಹಾಕುವ ಜೊತೆ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈ ಭೀಮ್ ಲೈಟ್​ನಿಂದ ಅಪಘಾತವಾದ ಪ್ರಕರಣಗಳು ಇತ್ತೀಚೆಗೆ ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಾವು ಹೈ ಭೀಮ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 295 ಕೋಟಿ ಹಣ ರಸ್ತೆ ಸುರಕ್ಷತೆಗೆ ಇರಿಸಲಾಗಿದೆ.

ಇದನ್ನೂ ಓದಿ:ಮೀಸಲಾತಿ ವಿಚಾರ: ಎಸ್​ಸಿ ಎಸ್​ಟಿ ಸಮುದಾಯಕ್ಕೆ ಶೀಘ್ರದಲ್ಲೇ ಸಿಹಿ ಸುದ್ದಿ - ಸಚಿವ ಶ್ರೀರಾಮುಲು

ಹೈ ಭೀಮ್ ಲೈಟ್ ಹಾಕಿಕೊಂಡು ಬರುವ ಟ್ರಕ್, ಬೈಕ್ ಸವಾರರಿಗೆ 500 ರೂ. ದಂಡ ಹಾಕುವ ಕೆಲಸ ಮಾಡಲಾಗಿದೆ. ರಾಜ್ಯದ ಕೆಲವೊಂದು ಜಾಗ ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ. 342 ಬ್ಲಾಕ್ ಸ್ಪಾಟ್ ಉಳಿದಿವೆ. ಈಗಾಗಲೇ 600 ಬ್ಲಾಕ್ ಸ್ಪಾಟ್ ತೆರವು ಮಾಡಿದ್ದು, ಉಳಿದವನ್ನೂ ತೆಗೆಯಿವ ಕೆಲಸ ಮಾಡುತ್ತೇವೆ. ಹೈ ಭೀಮ್ ಹಾಕಿದವರಿಗೆ ದಂಡದ ಜೊತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. 8 ಸಾವಿರ ಕೇಸ್ ಈ ಹಿಂದೆ ಇತ್ತು. ಈಗ ಕೇವಲ 703 ಕೇಸ್ ಇದೆ, ಎಲ್ಲ ರೀತಿಯಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ.

ಐಷಾರಾಮಿ ಕಾರು ತೆರಿಗೆ ವಂಚನೆ ಕೇಸ್ ಸಿಐಡಿಗೆ: ಐಷಾರಾಮಿ ಕಾರುಗಳ ಜೀವಿತಾವಧಿ ತೆರಿಗೆ ಪಾವತಿಸಿಕೊಳ್ಳದೆ ತೆರಿಗೆ ವಂಚಿಸಿರುವ 226 ಪ್ರಕರಣ ಪತ್ತೆಯಾಗಿವೆ. ಮಹಾಲೇಖಪಾಲರಿಂದ ಆಡಿಟ್ ಮಾಡಿಸಿ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು,ಅಕ್ರಮ ಕುರಿತು ಎಆರ್ಟಿಒಗಳಿಂದ ವರದಿಗೆ ಆದೇಶಿಸಲಾಗಿದೆ. ಅದರ ವರದಿ ಬಂದಿದೆ. ಭಾಗಿಯಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಅಗತ್ಯ ಬಿದ್ದರೆ ಸಿಐಡಿಗೆ ವಹಿಸುವುದಾಗಿ ಹಿಂದೆ ಹೇಳಿದ್ದೆ. ಈ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ. ಅವ್ಯವಹಾರದ ಕುರಿತು ಮಹಾಲೇಖಪಾಲರಿಂದ ಆಡಿಟ್ ಮಾಡಿಸಿ ಯಾವ ಏಜೆನ್ಸಿ, ಯಾವ ಅಧಿಕಾರಿ ಅವ್ಯವಹಾರ ಮಾಡಿದ್ದಾರೆ ಎಂದು ವರದಿ ತರಿಸಿಕೊಳ್ಳಲಾಗುತ್ತದೆ. ವರದಿ ಬರುತ್ತಿದ್ದಂತೆ ಸಿಐಡಿಗೆ ವಹಿಸಲಾಗುತ್ತದೆ ಎಂದು ಹೇಳಿದರು.

Last Updated : Sep 16, 2022, 2:30 PM IST

ABOUT THE AUTHOR

...view details