ಕರ್ನಾಟಕ

karnataka

By

Published : Sep 23, 2020, 1:54 PM IST

Updated : Sep 23, 2020, 2:12 PM IST

ETV Bharat / state

ಸಿಎಂ ಬಿಎಸ್​ವೈ ಕುಟುಂಬದಿಂದ ಭ್ರಷ್ಟಾಚಾರ: ಕಾಂಗ್ರೆಸ್​ ಆರೋಪ

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

CM should give resign his position; congresss
ಸಿಎಂ ಬಿಸ್​ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು; ಕಾಂಗ್ರೆಸ್​ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಡಿಎನಲ್ಲಿ 666 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ. ಸಿಎಂ ಪುತ್ರ ವಿಜಯೇಂದ್ರ, ಗುತ್ತಿಗೆದಾರರ ನಡುವೆ ಲಂಚದ ವಹಿವಾಟು ನಡೆದಿದೆ. ಶಶಿಧರ್ ಮರಾಡಿ ಕೂಡ ಇದರಲ್ಲಿ ಭಾಗಿಯಾಗಿ ಆರ್​ಟಿಜಿಎಸ್‌ ಮೂಲಕವೇ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸಿಎಂ ಪುತ್ರ, ಮೊಮ್ಮಗ, ಅಳಿಯ ಇದರಲ್ಲಿ ಭಾಗಿ ಆಗಿದ್ದಾರೆ. ಇದು ಕೇವಲ ಆರೋಪವಲ್ಲ, ಸತ್ಯ. ಇದರ ಸಂಪೂರ್ಣ ದಾಖಲೆಗಳು ನಮ್ಮಲ್ಲಿವೆ. ಹೀಗಾಗಿ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಸೆಕೆಂಡ್ ಕೂಡ ವೇಸ್ಟ್ ಮಾಡದೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ

ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಅಳಿಯ ಹಾಗೂ ಮೊಮ್ಮಗ ನಡೆಸಿರುವ 666 ಕೋಟಿ ರೂ. ಮೌಲ್ಯದ ಹಗರಣದ ವಿವರವನ್ನು ಸಿದ್ದರಾಮಯ್ಯ ನೀಡಿದರು. ಇದು ಭಾರತೀಯ ದಂಡ ಸಂಹಿತೆ 123ರ ಪ್ರಕಾರ ಕ್ರಿಮಿನಲ್ ಪ್ರಕರಣವಾಗಿದೆ. 302ರ ಉಲ್ಲಂಘನೆಯಾಗಿದೆ. ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆದಿದ್ದರೂ ಇಲಾಖೆ ಏಕೆ ಸುಮ್ಮನಿದೆ. ಸಣ್ಣಪುಟ್ಟ ಹಣಕಾಸು ವ್ಯವಹಾರದ ಮೇಲೆ ನಿಗಾ ವಹಿಸುವ ಇಲಾಖೆ ಯಾಕೆ ಸುಮ್ಮನಿದೆ? ಎಸಿಬಿ ಏನು ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪ ಅಲ್ಲ. ಮೇಲ್ನೋಟಕ್ಕೆ ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರು ಭ್ರಷ್ಟಾಚಾರ ನಡೆಸಿರುವುದಕ್ಕೆ ಆಧಾರವಾಗಿದೆ ಎಂದರು.

ಇದೊಂದು ಹಗಲು ದರೋಡೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಇವರು ರಾಜೀನಾಮೆ ನೀಡದಿದ್ದರೆ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ದಾಖಲೆಗಳನ್ನು ಕಳೆದು ಹಾಕುವ ಅವಕಾಶ ಇದೆ. ಕೂಡಲೇ ಈ ಘಟನೆಯನ್ನು ಕ್ರಿಮಿನಲ್ ಪ್ರಕರಣವೆಂದು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸುವ ಕಾರ್ಯ ಆಗಬೇಕು ಎಂದರು. ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಒಂದೊಮ್ಮೆ ಅವರು ರಾಜೀನಾಮೆ ನೀಡದಿದ್ದರೆ, ಅವರನ್ನು ಆ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದರು.

ಯಡಿಯೂರಪ್ಪನವರಿಗೆ ಸಿಎಂ ಆಗಿ ಮುಂದುವರೆಯಲು ನೈತಿಕ ಹಕ್ಕಿಲ್ಲ: ಸುರ್ಜೇವಾಲ ವಾಗ್ದಾಳಿ

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಗರಣದ ಮತ್ತಷ್ಟು ಮಾಹಿತಿ ಒದಗಿಸಿದರು. ಸುರ್ಜೇವಾಲ ಕುರಿತು ಮಾತನಾಡಿ, ಇವರು ಅತ್ಯಂತ ಅನುಭವಿ ಹಾಗೂ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ ಅನುಭವ ಹೊಂದಿರುವ ನಾಯಕರು, ನಮ್ಮ ರಾಜ್ಯಕ್ಕೆ ಲಭಿಸಿರುವುದು ಹೆಮ್ಮೆಯ ಸಂಗತಿ. ಇವರ ಮಾರ್ಗದರ್ಶನದಲ್ಲಿ ನಾವು ಪಕ್ಷವನ್ನು ಮುನ್ನಡೆಸಲು ಸಿದ್ಧವಿದ್ದೇವೆ. ಇವರ ಅನುಭವ ಹಾಗೂ ಹಿರಿತನ ಮುಂದಿನ ದಿನಗಳಲ್ಲಿ ಪಕ್ಷದ ಪ್ರಗತಿಗೆ ಸಹಕಾರ ನೀಡಲಿದೆ. ನಿರಂತರವಾಗಿ ಇವರ ಅನುಭವದ ಸಹಕಾರ ನಮಗೆ ಸಿಗುವ ವಿಶ್ವಾಸ ಇದೆ ಎಂದು ಹೇಳಿ, ಸಿದ್ದರಾಮಯ್ಯ ಅವರ ಜೊತೆಗೂಡಿ ಅವರನ್ನು ಸನ್ಮಾನಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನ ಮಂಡಲದ ಎರಡು ಸದನಗಳಲ್ಲಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲಿದೆ. ಅಲ್ಲದೆ ಇದೇ ಸಂದರ್ಭ ರಾಜ್ಯ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೂಲಕ ಪ್ರಕರಣದ ತನಿಖೆ ನಡೆಸಬೇಕು. ಇಲ್ಲವಾದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ. ಮುಖ್ಯಮಂತ್ರಿಗಳ ಪುತ್ರನೇ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಅಲ್ಲದೆ ತಮ್ಮ ಕುಟುಂಬವನ್ನು ರಕ್ಷಿಸಲು ನಿಂತಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಇವರು ಇದ್ದು ಪ್ರಾಮಾಣಿಕ ತನಿಖೆ ನಡೆಯಲು ಹೇಗೆ ಸಾಧ್ಯ? ಹೀಗಾಗಿ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತಿದೆ ಎಂದರು.

ಕರ್ನಾಟಕಕ್ಕೆ ಸಾಕಷ್ಟು ಬಾರಿ ಭೇಟಿ ಕೊಟ್ಟಿದ್ದೇನೆ. ನನಗೆ ಇಲ್ಲಿ ಬಂದಾಗ ಕನ್ನಡಿಗ ಎಂಬ ಭಾವನೆ ಹೆಚ್ಚಾಗಿ ವ್ಯಕ್ತವಾಗುತ್ತದೆ. ಕರ್ನಾಟಕದ ಪರವಾಗಿ ಕಾರ್ಯನಿರ್ವಹಿಸುವುದಕ್ಕೆ ಹೆಮ್ಮೆಯಿದೆ ಎಂದರು.

Last Updated : Sep 23, 2020, 2:12 PM IST

ABOUT THE AUTHOR

...view details