ಕರ್ನಾಟಕ

karnataka

ಸಂಪುಟ ಸಚಿವರ ಜೊತೆ ಸಿಎಂ ಸಭೆ: ಸಚಿವರ ಜೊತೆ ನಡೆಸಿದ ಸಮಾಲೋಚನೆ ಏನು?

By

Published : Sep 7, 2020, 11:53 PM IST

ಸೆ. 21ರಿಂದ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪನವರು ಸಂಪುಟ ಸಚಿವರೊಂದಿಗೆ ಇಂದು ಸಭೆ ನಡೆಸಿದರು. ಈ ವೇಳೆ ಸದನದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ ಅಂಶಗಳ ಮೂಲಕ ಕೊಡಬೇಕಾದ ಉತ್ತರ ಬಗ್ಗೆ ಚರ್ಚಿಸಿದರು.

CM meeting with Cabinet Minister
ಸಿಎಂ ಯಡಿಯೂರಪ್ಪ

ಬೆಂಗಳೂರು : ಸಂಪುಟ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು. ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ ಅಧಿವೇಶನ, ಕೇಂದ್ರದಿಂದ ಬರಬೇಕಾದ ಅನುದಾನ, ನೆರೆ‌ ಪರಿಹಾರ ಸಂಬಂಧ ಸಿಎಂ ಸಂಪುಟ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ 22ಕ್ಕೂ ಹೆಚ್ಚು ಸಂಪುಟ ಸಚಿವರು ಭಾಗಿಯಾಗಿದ್ದರು. ಅಧಿವೇಶನಕ್ಕೆ ಸಜ್ಜಾಗುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗಿದೆ. ಕೆಲ ವಿಧೇಯಕಗಳ ಮಂಡನೆ, ಅಭಿವೃದ್ಧಿ ಕಾರ್ಯಗಳು, ಇಲಾಖೆ ಕಾರ್ಯಗಳು, ಕೊವೀಡ್ ತಡೆಗೆ ಹಾಗೂ ಪ್ರವಾಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸದನದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ ಅಂಶಗಳ ಮೂಲಕ ಉತ್ತರ ಕೊಡುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಡ್ರಗ್ಸ್ ದಂಧೆ, ಅದರ ನಿಯಂತ್ರಣ ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಲಾಖಾವಾರು ಯೋಜನೆ, ಕೇಂದ್ರದಿಂದ ಬರಬೇಕಿರುವ ಬಾಕಿ ಅನುದಾನಗಳ ಬಗ್ಗೆ ಸಿಎಂ ಸಂಬಂಧಿತ ಸಚಿವರಲ್ಲಿ ಮಾಹಿತಿ ಕೇಳಿದ್ದಾರೆ. ಇನ್ನು ಎರಡು ದಿನಗಳಲ್ಲಿ ಈ ಬಗ್ಗೆ ನಿಖರ ಮಾಹಿತಿ ಕೊಡುವಂತೆ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮುಂದಿನ ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ತೆರಳುವ ಸಾಧ್ಯತೆ ಇದ್ದು, ಕೇಂದ್ರದ ವಿವಿಧ ಸಚಿವರುಗಳನ್ನು ಭೇಟಿ ಮಾಡಲಿದ್ದು, ರಾಜ್ಯದ ಬಾಕಿ ಯೋಜನೆಗಳು, ಬಾಕಿ ಅನುದಾನಗಳಿಗೆ ಮನವಿ ಮಾಡಲಿದ್ದಾರೆ. ಕೇಂದ್ರಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ.

ಸಂಪುಟ ಸರ್ಜರಿ ಬಗ್ಗೆನೂ ಚರ್ಚೆ:

ಸಂಪುಟ ಸರ್ಜರಿ ಬಗ್ಗೆನೂ ಸಿಎಂ ಪ್ರಸ್ತಾಪಿಸಿದ್ದು, ಈ ಬಗ್ಗೆ ಸಚಿವರಿಗೆ ಸಿಎಂ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಅಪಾಯಿಂಟ್ಮೆಂಟ್ ಕೇಳಿದ್ದೇನೆ. ಹೈಕಮಾಂಡ್ ಭೇಟಿಗೆ ಆಹ್ವಾನ ಬಂದ್ರೆ ಕೂಡಲೇ ದೆಹಲಿಗೆ ಹೊರಡುವೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್ ‌ನಿರ್ಧಾರವೇ ಅಂತಿಮ. ಸಚಿವರನ್ನು ಸಂಪುಟದಿಂದ ಕೈಬಿಡುವ ವಿಚಾರದಲ್ಲೂ ವರಿಷ್ಠರದ್ದೇ ಅಂತಿಮ ನಿರ್ಧಾರ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡ್ರೂ ಒಪ್ಪಿಕೊಳ್ಳಬೇಕು ಎಂದು ಮನವರಿಕೆ ಮಾಡಿದ್ದಾರೆ.

ಸಚಿವರನ್ನು ಸಂಪುಟದಿಂದ ಕೈಬಿಡೋದು ಬೇಡ ಎಂದು ಮನವಿ ಮಾಡುತ್ತೇನೆ. ಆದ್ರೆ ವರಿಷ್ಠರ ನಿರ್ಧಾರ ಏನು ಅಂತ ಗೊತ್ತಿಲ್ಲ. ಉಳಿದ ಅವಧಿಗೆ ನೀವೆಲ್ಲ ನನ್ನ ಬೆಂಬಲಕ್ಕಿರಿ, ನಿಮ್ಮ ಬೆಂಬಲಕ್ಕೆ ನಾನಿರುವೆ. ಉತ್ತಮ‌ ಆಡಳಿತ ಕೊಡೋಣ ಎಂದು ಮನವಿ ಮಾಡಿದರು ಎಂದು ಹೇಳಲಾಗಿದೆ.

ಇದೇ ವೇಳೆ ಸಂಪುಟದಿಂದ ಕೈಬಿಡದಂತೆ ಕೆಲ ಸಚಿವರು ಸಿಎಂಗೆ ಮನವಿ‌ ಮಾಡಿದ್ದಾರೆ ಎನ್ನಲಾಗಿದೆ. ಸಚಿವರಾಗಿ‌ ಕೆಲಸ ಮಾಡಲು ಕೋವಿಡ್ ಅಡ್ಡಿಯಾಗಿದೆ. ನಮ್ಮ ಇಲಾಖೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಜಾರಿ ಮಾಡುವ ಚಿಂತನೆ ಇದೆ. ಆದ್ರೆ ಕೋವಿಡ್​​ನಿಂದ ಇಲಾಖಾ‌ ಯೋಜನೆಗಳ ಜಾರಿ‌ ಕಷ್ಟವಾಗಿದೆ. ನಮಗೆ ಇನ್ನೂ ಕಾಲಾವಕಾಶ ಬೇಕು. ಒಂದೇ ವರ್ಷದಲ್ಲಿ ಇಲಾಖೆಯಲ್ಲಿ ಸಾಧನೆ ಮಾಡೋದು ಕಷ್ಟ ಎಂದು ಅವಲತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details