ಕರ್ನಾಟಕ

karnataka

By

Published : Sep 2, 2019, 4:49 PM IST

ETV Bharat / state

ಮೆಟ್ರೋಗೆ ಭೂಮಿ ನೀಡದ ಖೇಣಿಗೆ ಸಿಎಂ ತರಾಟೆ

ಮೆಟ್ರೋ ಕಾಮಗಾರಿ ನಡೆಸಲು ಭೂಮಿಯನ್ನು ಬಿಟ್ಟುಕೊಡದೇ ತಕರಾರು ಎತ್ತುತ್ತಿರುವ ನೈಸ್ ಸಂಸ್ಥೆ ಎಂಡಿ ಅಶೋಕ್ ಖೇಣಿಯನ್ನು ಸಿಎಂ ಬಿಎಸ್​ವೈ ತೀವ್ರ ತರಾಟೆಗೆ ತೆಗದುಕೊಂಡಿದ್ದು, ಶೀಘ್ರವೆ ಬಿ.ಎಂ.ಆರ್.​ಸಿ.ಎಲ್​ಗೆ ಭೂಮಿಯನ್ನು ಹಸ್ತಾಂತರಿಸುವಂತೆ ತಾಕೀತು ಮಾಡಿದ್ದಾರೆ.

ಖೇಣಿಗೆ ಸಿಎಂ ತರಾಟೆ

ಬೆಂಗಳೂರು: ಮೆಟ್ರೋ ಕಾಮಗಾರಿಗೆ ಭೂಮಿ ನೀಡದೇ ತಕರಾರು ಎತ್ತಿರುವ ನೈಸ್ ಸಂಸ್ಥೆ ಎಂಡಿ ಅಶೋಕ್ ಖೇಣಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಸ್ಟ್ 30ರಂದು ನಡೆದ ಬಿ.ಎಂ.ಆರ್.ಸಿ.ಎಲ್ ಪ್ರಗತಿ ಪರಿಶೀಲನೆ ಸಭೆಯಲ್ಲಿ, ನೈಸ್ ಸಂಸ್ಥೆ ತನ್ನ 4.83 ಎಕರೆ (19,585 ಚ.ಮೀ.) ಭೂಮಿ ನೀಡದೇ ಇರುವುದು ಮೆಟ್ರೋ‌ ಕಾಮಗಾರಿಗೆ ತೊಡಕಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಅಶೋಕ್ ಖೇಣಿಗೆ ಕರೆ ಮಾಡಿದ ಸಿಎಂ, ಕ್ಲಾಸ್ ತೆಗೆದುಕೊಂಡಿದ್ದಾರೆ.

ಏನಕ್ಕೆ ಮೆಟ್ರೋ ಕಾಮಗಾರಿಗೆ ಭೂಮಿ ನೀಡುತ್ತಿಲ್ಲ. ಸರ್ಕಾರದಿಂದ ಎಷ್ಟೆಲ್ಲಾ ಅನುಕೂಲ ಪಡೆದುಕೊಂಡಿದ್ದೀರಿ. ಎಷ್ಟೆಲ್ಲ ಲಾಭ ಮಾಡಿದ್ದೀರಾ. ಈಗ ಮೆಟ್ರೋ ಕಾಮಗಾರಿಗಾಗಿ ನಿಮ್ಮ ಭೂಮಿ ಏಕೆ ಬಿಟ್ಟುಕೊಡುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ನೀವು ಭೂಮಿ ನೀಡದೇ ಇರುವುದರಿಂದ ಮೆಟ್ರೋ‌ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಜನರಿಗೆ ಕಷ್ಟವಾಗುತ್ತಿದೆ. ಹಾಗಾಗಿ ಆದಷ್ಟು ಬೇಗ ಭೂಮಿಯನ್ನು ಬಿಎಂಆರ್​ಸಿಎಲ್ ಗೆ ನೀಡಬೇಕು ಎಂದು ತಾಕೀತು ಮಾಡಿದರು.

ಈ ಹಿಂದೆ ಏನಾಗಿದೆಯೋ ಗೊತ್ತಿಲ್ಲ. ಈಗ ನಾನು ಸಿಎಂ‌ ಆಗಿದ್ದೇನೆ. ಇನ್ನು ಐದಾರು ದಿನಗಳಲ್ಲಿ ನನ್ನನ್ನು ಬಂದು ಭೇಟಿಯಾಗಬೇಕು. ಭೂಮಿಯನ್ನು ಬಿಎಂಆರ್​ಸಿಎಲ್ ಗೆ ಬಿಟ್ಟುಕೊಡಬೇಕು. ನಿಯಮದಂತೆ ಭೂಮಿಗೆ ಏನು ಪರಿಹಾರ ನೀಡಬೇಕು ಅದನ್ನು ನೀಡುತ್ತೇವೆ. ಆದರೆ, ಈ ಕೂಡಲೇ ಭೂಮಿಯನ್ನು ಬಿಟ್ಟುಕೊಡಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಖೇಣಿಗೆ ಸಿಎಂ ತರಾಟೆ

ನೈಸ್ ಭೂಮಿ ತಕರಾರು ಏನು?:

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ನೈಸ್ ಸಂಸ್ಥೆಯ ಸುಮಾರು 4.83 ಎಕರೆ ಜಮೀನು ಬೇಕಾಗಿದೆ‌‌. ಆದರೆ, ನೈಸ್ ಸಂಸ್ಥೆ ಮೆಟ್ರೋಗೆ ಭೂಮಿ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ‌ ವಿವಿಧೆಡೆ ಮೆಟ್ರೋ ಕಾಮಗಾರಿ ವಿಳಂಬವಾಗಿದೆ. ಪರಿಹಾರ ಮೊತ್ತವೇ ನೈಸ್ ಸಂಸ್ಥೆ ಎತ್ತಿರುವ ಪ್ರಮುಖ ತಕರಾರು. ಈ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ನೈಸ್ ಜತೆ ಹಲವು ಬಾರಿ ಚರ್ಚೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ.

ನೈಸ್ ಸಂಸ್ಥೆ ಬಳಿ ಇರುವ ಭೂಮಿಯಲ್ಲಿ ಒಟ್ಟು ಮೂರು ರೀತಿಯ ಭೂಮಿಗಳಿವೆ. ಒಂದು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡು ಬಳಿಕ ನೈಸ್​ಗೆ ಸೇಲ್ ಮಾಡಿದ ಭೂಮಿ. ಇನ್ನೊಂದು ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಿದ್ದರೂ, ಭೂ ಮಾಲೀಕರಿಗೆ ಪರಿಹಾರ ನೀಡದ ಭೂಮಿ. ಮೂರನೆಯದ್ದು, ನೈಸ್ ಸಂಸ್ಥೆ ಗೆ ಲೀಸ್​ಗೆ ನೀಡಲಾದ ಭೂಮಿ. ಈ ಭೂಮಿಗಳ ಒಡೆತನ ಹಾಗೂ ಪರಿಹಾರ ಸಂಬಂಧ ತಕರಾರು ಉಂಟಾಗಿದೆ.

ABOUT THE AUTHOR

...view details