ಕರ್ನಾಟಕ

karnataka

ETV Bharat / state

ಸರ್ಕಾರ ಉಳಿಸಿಕೊಳ್ಳಲು ಹರಸಾಹಸ: ಸ್ಪೀಕರ್​​​​ ಭೇಟಿಯಾದ ಮೈತ್ರಿ ನಾಯಕರು​​

ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಸ್ಪೀಕರ್ ಕಚೇರಿಗೆ ಆಗಮಿಸಿತು.

By

Published : Jul 17, 2019, 5:56 PM IST

ಸ್ಪೀಕರ್​ ಭೇಟಿಯಾದ ಮೈತ್ರಿ ನಾಯಕರು​​

ಬೆಂಗಳೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಂದಿರುವ ತಂತ್ರಗಳ ಬಗ್ಗೆ ಸಿಎಂ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸ್ಪೀಕರ್​ ಜೊತೆ ಚರ್ಚೆ ನಡೆಸಿದ್ದಾರೆ.

ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಸ್ಪೀಕರ್ ಕಚೇರಿಗೆ ಆಗಮಿಸಿತು. ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಕೃಷ್ಣಬೈರೇಗೌಡ, ಆರ್.ವಿ.ದೇಶಪಾಂಡೆ, ಹೆಚ್.ಡಿ.ರೇವಣ್ಣ, ಸತೀಶ್ ಜಾರಕಿಹೊಳಿ, ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಐವಾನ್ ಡಿಸೋಜಾ, ಅಬ್ದುಲ್ ಜಬ್ಬಾರ್ ಮತ್ತಿತರರು ಆಗಮಿಸಿದರು.

ಸ್ಪೀಕರ್​ ಭೇಟಿಯಾದ ಮೈತ್ರಿ ನಾಯಕರು​​

ಈ ನಡುವೆ ಸ್ಪೀಕರ್ ಭೇಟಿಗೆ ಬಿಜೆಪಿ ನಿಯೋಗ ಸಹ ಆಗಮಿಸಿತು. ದೋಸ್ತಿ ನಾಯಕರು ಚರ್ಚೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಕ್ಕದ ಕೊಠಡಿಯಲ್ಲಿ ಮಾಜಿ ಸ್ಪೀಕರ್ ಬೋಪಯ್ಯ, ಶಾಸಕ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ ಕಾದು ಕುಳಿತರು.

ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ನಾಳೆಯ ನಡೆ ಬಗ್ಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಸ್ಪೀಕರ್ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಶಾಸಕರ ರಾಜೀನಾಮೆ ಅಂಗೀಕಾರ, ನಕಾರ, ಅನರ್ಹ ಎಲ್ಲವೂ ಸ್ಪೀಕರ್ ಅವರ ವಿವೇಚನೆಗೆ ಕೋರ್ಟ್ ಬಿಟ್ಟಿರುವುದರಿಂದ ಸಿಎಂ, ಸಚಿವರು ಹಾಗೂ ಸಿದ್ದರಾಮಯ್ಯನವರು ಸ್ಪೀಕರ್ ಬಳಿ ಗಂಭೀರ ಚರ್ಚೆ ನಡೆಸಿದ್ದಾರೆ.

ಸ್ಪೀಕರ್ ಕಚೇರಿಯಲ್ಲಿ ಅರ್ಧ ಗಂಟೆ ಮಾತುಕತೆ ಮಡೆಸಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ಸಚಿವರು ತೆರಳಿದರು. ಈ ಸಂದರ್ಭದಲ್ಲಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸಭೆಯ ನಿಯಮದ ಪ್ರಕಾರ ಸದನದ ಹೊರಗಡೆ ಉಳಿಯಬೇಕೆಂದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕು. ಈ ಬಗ್ಗೆ ಸ್ಪೀಕರ್ ಬಳಿ ಮಾಹಿತಿ ಕೇಳಿದ್ದೇವೆ ಎಂದರು.

ಸದಸ್ಯರು ಸದನಕ್ಕೆ ಗೈರಾಗಲು ಅನುಮತಿ ಪಡೆಯಬೇಕು. ವಿಪ್ ನೀಡೋದು ಆಯಾ ಪಕ್ಷದ ಹಕ್ಕು. ಶಾಸಕಾಂಗ ಪಕ್ಷದ ಹಕ್ಕು. ನಿಮ್ಮ ವಿವೇಚನೆಗೆ ಬಿಟ್ಟಿದ್ದು, ವಿಪ್ ಉಲ್ಲಂಘಿಸಿದರೆ ಆ ಬಗ್ಗೆ ದೂರು ನೀಡಿ. ಆಗ ಆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಈ ಎರಡು ವಿಚಾರದ ಬಗ್ಗೆ ಸ್ಪೀಕರ್ ಬಳಿ ಮಾಹಿತಿ ಕೇಳಲು ಹೋಗಿದ್ದೆವು ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

ಬಿಜೆಪಿ ನಿಯೋಗ ಭೇಟಿ: ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿಯೋಗ ಸ್ಪೀಕರ್ ಕಚೇರಿಯಿಂದ ತೆರಳಿದ ಬಳಿಕ ಬಿಜೆಪಿ ನಿಯೋಗ ಆಗಮಿಸಿ ಸ್ಪೀಕರ್ ರಮೇಶ್ ಕುಮಾರ್ ಅವರ ಜೊತೆ ಚರ್ಚೆ ನಡೆಸಿತು. ಕೆಲವೊತ್ತು ಚರ್ಚಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಿಜೆಪಿ ಮುಖಂಡರು ಸ್ಪೀಕರ್ ಕಚೇರಿಯಿಂದ ತೆರಳಿದರು.

ABOUT THE AUTHOR

...view details