ಕರ್ನಾಟಕ

karnataka

ETV Bharat / state

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಮನವಿಯನ್ನು ಕ್ಯಾಬಿನೆಟ್​ನಲ್ಲಿ ಇಟ್ಟು ತೀರ್ಮಾನ: ಸಿಎಂ

ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಒತ್ತಾಯಿಸಿ ತರಳಬಾಳು ಜಗದ್ಗುರುಗಳು ಮತ್ತು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ ಮಠಾಧೀಶರ ನಿಯೋಗ ಸಿಎಂಗೆ ಮನವಿ ಸಲ್ಲಿಸಿದೆ.

By ETV Bharat Karnataka Team

Published : Jan 8, 2024, 10:20 PM IST

ಲಿಂಗಾಯತ ಮಠಾಧೀಶರ ನಿಯೋಗ
ಲಿಂಗಾಯತ ಮಠಾಧೀಶರ ನಿಯೋಗ

ಬೆಂಗಳೂರು :ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎಂದು ಲಿಂಗಾಯತ ಮಠಾಧೀಶರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಮಾಡಿದೆ. ಮನವಿಯನ್ನು ಕ್ಯಾಬಿನೆಟ್​ನಲ್ಲಿ ಈ ವಿಷಯವನ್ನು ಇಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಗ ಭೇಟಿ ಮಾಡಿ ಮನವಿ ಪತ್ರ ನೀಡಿತು. ಮನವಿ ಪತ್ರದಲ್ಲಿ ಯಾವುದೇ ನಾಡು 'ಇವನಾರವ ಎನ್ನದೇ, ಇವ ನಮ್ಮವ' ಎಂಬ ಭ್ರಾತೃತ್ವದ ಭಾವನೆಯಿಂದಲೇ ಬಲವಾಗುತ್ತದೆ. ಎಲ್ಲರನ್ನೂ ಒಂದುಗೂಡಿಸಿ, ಅವರೆಲ್ಲರನ್ನೂ ಕಾಯಕದಲ್ಲಿ ತೊಡಗಿಸಿ, ಇದ್ದವರು ಇಲ್ಲದವರಿಗೆ ದಾಸೋಹ ಮಾಡುವುದನ್ನು ಕರ್ತವ್ಯವಾಗಿಸಿದಾಗ ಮಾತ್ರ ಈ ಸೋದರ ಭಾವನೆಯು ಗಟ್ಟಿಯಾಗುತ್ತದೆ. ನಾಡೂ ಅಭಿವೃದ್ಧಿಗೊಳ್ಳುತ್ತದೆ.

ಕನ್ನಡ ನಾಡಿನ ಸೌಭಾಗ್ಯವೆಂದರೆ, 900 ವರ್ಷಗಳ ಹಿಂದೆಯೇ ಈ ನೆಲದಲ್ಲಿ ಅಂತಹದೊಂದು ವಿದ್ಯಮಾನ ಚಳವಳಿಯಾಗಿ ಅರಳಿತು, ಬೆಳೆದಿತ್ತು. ಇಂದಿಗೂ ನಮ್ಮನ್ನು ಅದು ಕಾಪಾಡುತ್ತಲೇ ಇದೆ. ಹೀಗಾಗಿ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು. ಮುಂದಿನ ತಲೆಮಾರಿಗೂ ದಾಟಿಸುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ಸಾಧಿಸಲು ಇರುವ ಒಂದು ದಾರಿಯೆಂದರೆ, ಸರ್ಕಾರವೂ ಅದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಂತಹ ಒಂದು ಘೋಷಣೆಗಾಗಿ ನಾವು ನಿಮ್ಮನ್ನು ಒತ್ತಾಯಿಸುತ್ತಿದ್ದೇವೆ. ಅದು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸುವುದು. ಇಲ್ಲಿ ಬಸವಣ್ಣ ಯಾವುದೇ ಜಾತಿ ಅಥವಾ ಧರ್ಮದ ಪ್ರತಿನಿಧಿ ಅಲ್ಲ. ಬಸವಣ್ಣ ಒಂದು ಸಂಕೇತ. ಆತ ಜೇಡರ ದಾಸಿಮಯ್ಯನಿಂದ ಮಾದಾರ ಚೆನ್ನಯ್ಯನವರೆಗೆ, ಕಾಳವ್ವಯಿಂದ ಅಕ್ಕಮಹಾದೇವಿಯವರೆಗೆ, ಅಲ್ಲಮನಿಂದ ನಾರಾಯಣಗುರುಗಳವರೆಗೆ, ಚೆನ್ನಬಸವನಿಂದ ಭಗತ್ ಸಿಂಗ್ ವರೆಗೆ, ಅಂಬೇಡ್ಕರರಿಂದ ಕುವೆಂಪುರವರೆಗೆ, ಮಹಾವೀರನಿಂದ ಗುರುನಾನಕರವರೆಗೆ, ಕ್ರಿಸ್ತನಿಂದ ಪ್ರವಾದಿ ಪೈಗಂಬರ್‌ವರೆಗೆ, ಬುದ್ಧನಿಂದ ಸಂವಿಧಾನದವರೆಗೆ ನಮ್ಮ ಶರಣ ಚಳವಳಿಯು ಈ ಎಲ್ಲರ ಆಶಯಗಳನ್ನೂ ಧ್ವನಿಸಿದೆ. ಅದಕ್ಕೆ ವಚನಗಳ ಪ್ರಮಾಣವಿದೆ. ಅವೆಲ್ಲದರ ಸಂಕೇತ ಬಸವಣ್ಣ. ಹಾಗಾಗಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಘೋಷಣೆಯನ್ನು ವಿಳಂಬವಾಗಿಸದೆ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಒತ್ತಾಯಿಸಿದ್ದಾರೆ.

ಸಿಎಂ ಅಭಿಪ್ರಾಯ :ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ. ಆದ್ದರಿಂದ ಈ ಮಹತ್ವದ ಸಂಗತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಶ್ರೀಶೈಲ ಜಗದ್ಗುರುಗಳು, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಡಾ. ರಾಜಶೇಖರ ಶಿವಾಚಾರ್ಯರು, ಡಾ. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಶ್ರೀ ವೀರಭದ್ರ ಶಿವಾ ಕಡಕಂಚಿ, ಅಕ್ಕ ಅನ್ನಪೂರ್ಣತಾಯಿ, ಜ್ಞಾನ ಪ್ರಕಾಶ ಸ್ವಾಮೀಜಿ, ಡಾ. ಗಂಗಾಬಿಕೆ ಅಕ್ಕ,‌ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ 48 ಮಂದಿ ಸ್ವಾಮೀಜಿಗಳು, ಶರಣರು ನಿಯೋಗದಲ್ಲಿದ್ದ ಪ್ರಮುಖರು. ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಮತ್ತು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ನಿಯೋಗದ ಜೊತೆಗಿದ್ದರು.

ಇದನ್ನೂ ಓದಿ :ಗೆಲ್ಲುವ ರೂಪುರೇಷೆ ಕುರಿತು ಚರ್ಚೆ, ಸೀಟು ಹಂಚಿಕೆ ಹೈಕಮಾಂಡ್ ನಿರ್ಧಾರ: ಸಿ‌ ಟಿ ರವಿ

ABOUT THE AUTHOR

...view details