ಕರ್ನಾಟಕ

karnataka

40 ಪರ್ಸೆಂಟ್​ ಕಮಿಷನ್ ಬಿಜೆಪಿಯನ್ನು 40 ಸೀಟಿಗೆ ಸೀಮಿತಗೊಳಿಸುವುದು ಕಾಂಗ್ರೆಸ್ ಗುರಿ: ಬಿ.ಕೆ.ಹರಿಪ್ರಸಾದ್

By

Published : Mar 10, 2023, 5:39 PM IST

Updated : Mar 10, 2023, 7:56 PM IST

ಬಿಜೆಪಿಯಿಂದ ಪ್ರಮುಖ ನಾಯಕರುಗಳೇ ಕಾಂಗ್ರೆಸ್​ನತ್ತ ಬರುತ್ತಿರುವುದನ್ನು ನೋಡಿದರೆ ಬಿಜೆಪಿ ತಮ್ಮ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಬಿ ಕೆ ಹರಿಪ್ರಸಾದ್​ ವಾಗ್ದಾಳಿ ನಡೆಸಿದ್ದಾರೆ.

Legislative Council Leader of Opposition BK Hariprasad
ವಿಧಾನ ಪರಿಷತ್​ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್​

ವಿಧಾನ ಪರಿಷತ್​ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್​

ಬೆಂಗಳೂರು: 40 ಪರ್ಸೆಂಟ್​ ಕಮಿಷನ್ ಬಿಜೆಪಿ ಸರ್ಕಾರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 40 ಸೀಟಿಗೆ ನಿಲ್ಲಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ 60 ಸ್ಥಾನಗಳಿಗಿಂತ ಮೇಲೆ ಹೋಗೋದಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ.

40 ಪರ್ಸೆಂಟ್​ ಕಮಿಷನ್ ಸರ್ಕಾರವನ್ನು 40 ಸ್ಥಾನಗಳಿಗೆ ಸೀಮಿತಗೊಳಿಸಲು ನಾವು ಕಾಂಗ್ರೆಸ್​ನವರು ತಂತ್ರ ಮಾಡಿದ್ದೇವೆ. ಈಗಾಗಲೇ ಬಿಜೆಪಿ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಹಲವು ನಾಯಕರು ಬಂದಿದ್ದಾರೆ, ಬರುತ್ತಾ ಇದ್ದಾರೆ. ಮುಂದೆಯೂ ಬರುವವರಿದ್ದಾರೆ. ಪುಟ್ಟಣ್ಣ ಅಂತಹವರೇ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿರೋದನ್ನು ನೋಡಿದರೆ ಬಿಜೆಪಿಯ ಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತ ನಾಯಕರನ್ನು ಬಿಜೆಪಿ ಪಕ್ಷ ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಯಡಿಯೂರಪ್ಪ ಅಂತಹ ನಾಯಕರನ್ನೇ ಮೂಲೆ ಗುಂಪು ಮಾಡಿ, ಮಾರ್ಗದರ್ಶನ ಮಂಡಳಿಯ ಮಾರ್ಗದಲ್ಲಿ ನಿಲ್ಲಿಸಿದ್ದಾರೆ. ವಿ. ಸೋಮಣ್ಣ ಅವರು ಲಿಂಗಾಯತ ನಾಯಕರ ಜೊತೆಗೆ ಬೇರೆ ಸಮುದಾಯದವರ ಜೊತೆಗೂ ಒಳ್ಳೆ ಸಂಬಂಧ ಇದೆ. ಬಿಜೆಪಿಯಿಂದ ಸೋಮಣ್ಣನವರೇ ಬೇಸತ್ತಿರುವುದು ನಿಜ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನಂಬಿ ಯಾರು ಬೇಕಾದರೂ ಬರಬಹುದು ಎಂದರು.

ಇದನ್ನೂ ಓದಿ:ಶಾಸಕ ಮಾಡಾಳ್ ಪುತ್ರನ ವಿರುದ್ಧ ಮತ್ತೆರಡು ಎಫ್ಐಆರ್ ದಾಖಲಿಸಿದ ಲೋಕಾಯುಕ್ತ..!

ಟಿಕೆಟ್ ಸಂಬಂಧ ಯಾವುದೇ ಕಗ್ಗಂಟು ಇಲ್ಲ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ​ ಟಿಕೆಟ್​ ಆಕಾಂಕ್ಷಿಗಳಿಗೆ ಟಿಕೆಟ್ ಹಂಚಿಕೆ ಮಾಡುವ ವಿಚಾರದಲ್ಲಿ ಯಾವುದೇ ಕಗ್ಗಂಟು ಇಲ್ಲ ಎಂದಿರುವ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ‌ ಹರಿಪ್ರಸಾದ್​ , ನಮಗೆ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಸವಾಲಿಲ್ಲ. ಟಿಕೆಟ್ ಹಂಚಿಕೆ ನಮಗೆ ದೊಡ್ಡ ಜವಾಬ್ದಾರಿ. ಮೂರು ದಿನಗಳ ಕಾಲ ಸ್ಕ್ರೀನಿಂಗ್ ಕಮಿಟಿ ಸಭೆ ಮಾಡಿ ಚರ್ಚಿಸಿದ್ದೇವೆ ಎಂದರು.

ಸಂಪೂರ್ಣ ಮಾಹಿತಿಯನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡಿದ್ದೇವೆ. ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮವಾಗಲಿದೆ. ಟಿಕೆಟ್ ಸಂಬಂಧ ಯಾವುದೇ ಕಗ್ಗಂಟು ಇಲ್ಲ. ಮೂರು ದಿನಗಳ ಕಾಲ ಅದಕ್ಕಾಗಿಯೇ ಚರ್ಚೆ ನಡೆಸಿದ್ದೇವೆ. ಕೆಲ ತೀರ್ಮಾನವನ್ನ ಕೇಂದ್ರೀಯ ಚುನಾವಣಾ ಸಮಿತಿ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್ ಎಲ್ಲರೂ ಕೇಂದ್ರ ಚುನಾವಣಾ ಸಮಿತಿಯಲ್ಲಿ ಇದ್ದಾರೆ ಎಂದರು.

ಮಂಡ್ಯದಲ್ಲಿ ತ್ರಿಕೋನ ಸ್ಪರ್ಧೆ: ಬಿಜೆಪಿಗೆ ಮಂಡ್ಯ ಸಂಸದೆ ಸುಮಲತಾ ಸೇರ್ಪಡೆಯಿಂದ ತ್ರಿಕೋನ ಸ್ಪರ್ಧೆ ಆಗುತ್ತಾ ನೋಡೋಣ ಎಂದರು. ಮಂಡ್ಯದ ರಾಜಕೀಯ ಚಿತ್ರಣವೇ ಬೇರೆ, ಅನುಕಂಪದ ಅಲೆ ಮೇಲೆ ಗೆದ್ದಿರುವವರು. ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಜನತೆ ಕಾಂಗ್ರೆಸ್ ಪಕ್ಷ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಸುಮಲತಾ ಬಿಜೆಪಿ ಸೇರುತ್ತಾರೆ ಎಂದರೆ ಅದು ನಮಗೆ ಶಕ್ತಿ ಇದ್ದಂತೆ: ಸಂಸದ ಪ್ರತಾಪ್ ಸಿಂಹ

Last Updated : Mar 10, 2023, 7:56 PM IST

ABOUT THE AUTHOR

...view details