ನೆಲಮಂಗಲ: ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿರೋಧಿಸಿ ನಟ ಚೇತನ್ ನೇತೃತ್ವದಲ್ಲಿ ತಮಟೆ ಚಳುವಳಿ ಮಾಡಲಾಯಿತು.
ಬೆಂಗಳೂರು ಹೊರವಲಯದ ಬಾಗಲಗುಂಟೆ ಸರ್ಕಲ್ನಲ್ಲಿ ದಲಿತ ಸಂರಕ್ಷಣಾ ಸಮಿತಿ ಹಾಗೂ ನಟ ಚೇತನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಉತ್ತರಪ್ರದೇಶ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನಾನಿರತರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಹಥ್ರಾಸ್ ಪ್ರಕರಣ ಖಂಡಿಸಿ ಪ್ರತಿಭಟನೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಟ ಚೇತನ್, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ದೇಶದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಕಾನೂನು ರೂಪಿಸುವಂತೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದರು.
ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಯುವಶಕ್ತಿ ತಂಡದಿಂದ ಅತ್ಯಾಚಾರ ಘಟನೆ ಖಂಡಿಸಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಸಂತ್ರಸ್ತೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೊಂಬತ್ತಿ ಹಚ್ಚಿ ಸಂತಾಪ ಸೂಚಿಸಿದರು.