ಆನೇಕಲ್:ಕಳೆದ ಎಂಟು ತಿಂಗಳಿಂದ ತಮಿಳುನಾಡು-ಕರ್ನಾಟಕದ ಗಡಿಯಲ್ಲಿರುವ ಆನೆ ಕಾರಿಡಾರ್ ಸುತ್ತಲ ಪ್ರದೇಶವನ್ನು ಗಜಪಡೆ ಆಕ್ರಮಿಸುತ್ತಿದ್ದು, ಜನರು ರಸ್ತೆಯಲ್ಲಿ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬನ್ನೇರುಘಟ್ಟ,ಜವಳಗೆರೆ ಅರಣ್ಯಗಳು ಹಬ್ಬಿರುವಂತಹ ಪ್ರದೇಶಗಳಲ್ಲಿ ಆನೆ ಕಾರಿಡಾರ್ ಇದೆ. ಇಲ್ಲಿ ಆನೆ ನಡೆದದ್ದೇ ಹಾದಿ ಎನ್ನುವಂತಾಗಿದೆ. ಈ ಕಾರಿಡಾರ್ ನಡುವೆ ಇರುವ ಹತ್ತಾರು ಗ್ರಾಮಗಳಲ್ಲಿ ಜನವಸತಿ ಇದೆ. ಆನೆದಾಳಿಯ ಭೀತಿ ನಿವಾಸಿಗಳನ್ನು ಕಾಡುತ್ತಿದ್ದು, ಸೂಕ್ತ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.
ಕಾಡು,ತೋಟಗಳೇ ಹೆಚ್ಚಿರುವ ಈ ಭಾಗಗಳಲ್ಲಿ ಸಹಜವಾಗಿಯೇ ಆನೆಗಳು ಆಹಾರ ಹುಡುಕಿ ಬರುತ್ತಿವೆ. ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡರೂ ಫಲಪ್ರದವಾಗಿಲ್ಲ. ಗ್ರಾಮದ ಕೆರೆ, ರಸ್ತೆ, ಊರುಗಳಲ್ಲಿ ಆನೆಗಳು ನಿರ್ಭೀತಿಯಿಂದ ಓಡಾಡುತ್ತಿರುವುದು ಜನರಲ್ಲಿ ಭೀತಿ ಉಂಟುಮಾಡುತ್ತಿದೆ.
ತಮಿಳುನಾಡಿನ ಸೂಳಗಿರಿಯ ಅತ್ತಿಮೊಗಂ, ಕಾಮನದೊಡ್ಡಿ, ಬುಕ್ಕಸಾಗರಂ ಕಡೆಯ ಸುತ್ತ ಗ್ರಾಮಗಳ ನಡುವೆಯೇ ಆನೆಗಳು ಸುತ್ತಾಡುತ್ತಿವೆ. ಹೀಗೆ ಆನೆಗಳ ಕಾಟ ಮುಂದುವರಿದರೆ ಮುಂದೊಂದು ದಿನ ಅವುಗಳು ಜನರ ಮೂಲ ಜಾಗಗಳನ್ನು ಆಕ್ರಮಿಸಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ. ಹಾಗಾಗಿ ಇಲ್ಲಿನ ಜನರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.