ದೇವನಹಳ್ಳಿ : ಪ್ರಸಾದ ತೆಗೆದುಕೊಳ್ಳಲು ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ ಸವರ್ಣಿಯ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಕುಟುಂಬದ ಮೇಲೆ ಮಾರಣಾಂತಿಕ ದಾಳಿ ಮತ್ತು ಬಾಲಕನ ತಾಯಿಯ ಗುಪ್ತಾಂಗದ ಮೇಲೂ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸದಂತೆ ಜಿಲ್ಲಾಡಳಿತದಿಂದ ಅಧಿಕಾರಿಗಳ ತಂಡ ದಲಿತ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಂತ್ವನ ಹೇಳಿ ಧೈರ್ಯ ತುಂಬಿದೆ.
ದೇವಸ್ಥಾನಕ್ಕೆ ಪ್ರಸಾದ ಸ್ವೀಕರಿಸಿಲು ಗ್ರಾಮದ ದಲಿತ ಕುಟುಂಬ ಮುನಿ ಅಂಜಿನಪ್ಪ ಮತ್ತು ಅರುಣಾರವರ ಕಿರಿಯ ಮಗ ಹೋಗಿದ್ದು, ಈ ವೇಳೆ ಸವರ್ಣಿಯ ಯುವಕ ಗಿರೀಶ್ ಬಾಲಕನ ಮೇಲೆ ನೂಕಿ ಹಲ್ಲೆ ನಡೆಸಿದ್ದ. ನಂತರ ಈ ಬಗ್ಗೆ ಗಿರೀಶನನ್ನ ಬಾಲಕನ ಹೆತ್ತವರು ಪ್ರಶ್ನೆ ಮಾಡಿದ್ದಕ್ಕೆ, ಸರ್ವಣಿಯರಾದ ಗಿರೀಶ್, ಮಂಜುನಾಥ್, ವೆಂಕಟೇಗೌಡ ದೊಣ್ಣೆಯಿಂದ ಮಾರಾಣಾಂತಿವಾಗಿ ಹಲ್ಲೆ ನಡೆಸಿದ್ದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಮತ್ತು ಮಹಿಳೆಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ 3 ಕಿ.ಮೀ ಅಂತರದಲ್ಲಿರುವ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣ ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿತ್ತು.