ಬಾಗಲಕೋಟೆ:ಸ್ಮಶಾನಕ್ಕೆ ಜಾಗ ಇಲ್ಲದೇ ಪಂಚಾಯಿತಿ ಮುಂದೆಯೇ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸ್ಮಶಾನಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲವಂತೆ. ಈ ನಡುವೆ, ಕಾಳಪ್ಪ ಕಂಬಾರ ಎಂಬ ವ್ಯಕ್ತಿ ಅಸಹಜವಾಗಿ ಮೃತಪಟ್ಟಿದ್ದು ಅವರ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ಮುಂದೆಯೇ ಅಂತ್ಯಸಂಸ್ಕಾರ ಮಾಡಲು ಮುಂದಾದರು.
ಇದರಿಂದ ಕೆಲ ಸಮಯ ಗೊಂದಲಮಯ ವಾತಾವರಣ ಉಂಟಾಗಿತ್ತು. ಸ್ವಂತ ಜಮೀನು ಇರುವವರು ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ ಜಮೀನು ಇಲ್ಲದೆ ಇರುವವರು ಎಲ್ಲಿ ಹೋಗಬೇಕು ಎಂದು ಕೋಪಗೊಂಡ ಜನರು ಪಂಚಾಯಿತಿ ಎದುರು ಆಗಮಿಸಿ ಟ್ರಾಕ್ಟರ್ನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ತಂದು ಹಾಕಿದರು.