ಕರ್ನಾಟಕ

karnataka

By

Published : Aug 18, 2022, 12:26 PM IST

ETV Bharat / sports

ನನ್ನ ವೃತ್ತಿಜೀವನ ಪ್ರಶ್ನಿಸಿದವರಿಗೆ ಗೆದ್ದ ಪದಕಗಳೇ ಉತ್ತರ.. ನಿಖತ್ ಜರೀನ್​

ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆ ತೋರಿದ ನಿಖತ್​ ಜರೀನ್​ ಅವರು ಅಂದು ಬಾಕ್ಸಿಂಗ್​ ಅಖಾಡಕ್ಕೆ ಇಳಿದಾಗ ತಾವೆದುರಿಸಿದ ಸವಾಲಿನ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

nikhat-zareen
ನಿಖತ್ ಜರೀನಾ

ಹೈದರಾಬಾದ್:ಬಾಕ್ಸಿಂಗ್​ ಎಂಬುದು ಪಂಚಿಂಗ್​ ಗೇಮ್​. ರಟ್ಟೆಯಲ್ಲಿ ಶಕ್ತಿ ಇರುವವರು ಮಾತ್ರ ಆಡೋ ಆಟ. ಹುಡುಗಿಯರಿಗೆ ಬಾಕ್ಸಿಂಗ್​ ಒಗ್ಗಲ್ಲ. ಇದು ಪುರುಷರ ಫೈಟ್​. ಮುಖಕ್ಕೆ ಗಾಯಗಳಾಗುತ್ತವೆ..?

ಈ ಎಲ್ಲ ಕ್ಷುಲ್ಲಕ ಪ್ರಶ್ನೆಗಳನ್ನು ವಿಶ್ವ ಚಾಂಪಿಯನ್​, ಕಾಮನ್​ವೆಲ್ತ್​ ಗೇಮ್ಸ್​ ಚಿನ್ನದ ಹುಡುಗಿ ಹೈದರಾಬಾದ್​ನ ಬಾಕ್ಸರ್​ ನಿಖತ್​ ಜರೀನ್​​ ಬಾಕ್ಸಿಂಗ್​ ಅಖಾಡಕ್ಕೆ ಇಳಿದ ಆರಂಭದಲ್ಲಿ ಎದುರಿಸಿದ್ದರು. ಆದರೆ, ಗಟ್ಟಿಗಿತ್ತಿ ಜರೀನಾ ಮಾತ್ರ ಇವ್ಯಾವಕ್ಕೂ ಕಿವಿಕೊಡದೇ ಕೈಗೆ ತೊಟ್ಟ ಪಂಚ್​ ಗ್ಲೌಸ್​ಗಳನ್ನೇ ನಂಬಿ ಇಂದು ವಿಶ್ವವೇ ಕಣ್ಣರಳಿಸಿ ನೋಡುವಂತ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನಕ್ಕೆ ಪಂಚ್​ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ ಚಿನ್ನದೊಂದಿಗೆ ನಿಖತ್ ಜರೀನಾ

ಹೈದರಾಬಾದ್​ನ ನಿಖತ್​ ಜರೀನಾ ಅವರು "ಈಟಿವಿ ಭಾರತ್​"ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತಾವೆದುರಿಸಿದ ಸವಾಲು, ಪ್ರಶ್ನೆಗಳಿಗೆ ನಾನು ಗೆದ್ದ ಪದಕಗಳೇ ಉತ್ತರ ಎಂದು ಪಂಚ್​ ನೀಡಿದರು. ಅವರ ಸಂದರ್ಶನದ ಮಾತಿನ ಸಾರವಿದು.

  1. ನನ್ನ ವೃತ್ತಿಜೀವನದ ಆರಂಭದಲ್ಲಿ ಅನೇಕ ನಿರಾಶಾದಾಯಕ ಮಾತುಗಳನ್ನು ಕೇಳಿದ್ದೇನೆ. ಎಲ್ಲವುಗಳಿಗೆ ನಾನು ಉತ್ತರಿಸಲು ಬಯಸಲ್ಲ, ಬದಲಾಗಿ ಗೆದ್ದ ಪದಕಗಳೇ ಉತ್ತರ ನೀಡುತ್ತವೆ. ಗೆಲ್ಲುವ ಬಯಕೆ ಮತ್ತು ಹಠ ಇದ್ದರೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ.
    ಕುಟುಂಬದೊಂದಿಗೆ ಕಾಮನ್​ವೆಲ್ತ್ ಗೇಮ್ಸ್​ ಚಿನ್ನದೊಂದಿಗೆ ಬಾಕ್ಸರ್​ ನಿಖತ್ ಜರೀನಾ
  2. ನನಗೆ ಸಿಗುತ್ತಿರುವ ಬೆಂಬಲವನ್ನು ನೋಡಿ ತುಂಬಾ ಸಂತೋಷವಾಗಿದೆ. ನನ್ನ ಯಶಸ್ಸನ್ನು ಎಲ್ಲರೂ ಸಂಭ್ರಮಿಸುತ್ತಾರೆ. ನನ್ನ ಜೀವನ ಮೊದಲಿಗಿಂತಲೂ ಬಹಳ ಸುಧಾರಿಸಿದೆ. ಜನರಿಂದ ಬೆಂಬಲ ಮತ್ತು ಅಗಾಧ ಪ್ರೀತಿಯನ್ನು ಸಂಪಾದಿಸಿದ್ದೇನೆ. ಜನರ ನಿರೀಕ್ಷೆಯಂತೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಥಾನ ಪಡೆಯುವೆ. ಇದಕ್ಕೆ ನೀತು, ಮಂಜುರಾಣಿ ಮತ್ತು ಅನಾಮಿಕಾ ಅವರಂತಹ ಬಾಕ್ಸರ್‌ಗಳ ತೀವ್ರ ಪೈಪೋಟಿಯಿದೆ.
  3. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 52 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ನಾನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 48- 50 ಕೆಜಿ ವಿಭಾಗದಲ್ಲಿ ಕಣಕ್ಕಿಳಿದೆ. ಕ್ರೀಡಾಕೂಟಕ್ಕಾಗಿ ತೂಕ ಇಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅದಕ್ಕಾಗಿ ನನ್ನ ನೆಚ್ಚಿನ ಆಹಾರವನ್ನು ತ್ಯಜಿಸಿದೆ. ವಿಶೇಷವಾಗಿ ಬಿರಿಯಾನಿ ತಿನ್ನೋದು ಬಿಟ್ಟೆ. ಪದಕ ಗೆದ್ದ ಬಳಿಕ ತಾಯಿಗೆ ಹೇಳಿ ಮೊದಲು ತಿಂದದ್ದೇ ಬಿರಿಯಾನಿ.
  4. ಅಕ್ಟೋಬರ್‌ನಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸಬೇಕಾಗಿದೆ. ಏಷ್ಯನ್ ಗೇಮ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಅದು ನಡೆದಿದ್ದರೆ ನಾನು ಹ್ಯಾಟ್ರಿಕ್ ಚಿನ್ನ ಗಳಿಸುತ್ತಿದ್ದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದೇ ನನ್ನ ಅಂತಿಮ ಗುರಿ.

ಓದಿ:ರಾಯಪುರ ಜಂಗಲ್ ರಂಬಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್

ABOUT THE AUTHOR

...view details