ಪುಣೆ: ಸತತ ಸೋಲುಗಳಿಂದ ಕೆಂಗೆಟ್ಟಿರುವ 5 ಬಾರಿಯ ಐಪಿಎಲ್ ಚಾಂಪಿಯನ್ಸ್ ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯದೇ ಉಳಿದಿರುವ ಏಕೈಕ ತಂಡ. ಇಂದು ಸಂಜೆ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಿರುವ ರೋಹಿತ್ ಪಡೆ, ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಬಹುತೇಕ ಆವೃತ್ತಿಗಳಲ್ಲಿ ಅಗ್ರಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಚೆನ್ನೈ ಮತ್ತು ಮುಂಬೈ ತಂಡಗಳು ಪ್ರಸ್ತುತ ಆವೃತ್ತಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವುದಕ್ಕೆ ಪೈಪೋಟಿ ನಡೆಸುತ್ತಿವೆ.
ಮುಂಬೈ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಮ್ಮ ತಂಡದ ಆಧಾರವಾಗಿದ್ದ ನಾಲ್ಕು ಸ್ಟಾರ್ ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ನಂತರ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಿತ್ತು. ಆದರೆ ಇದ್ಯಾವುದೂ ಮುಂಬೈ ತಂಡಕ್ಕೆ ನೆರವಾಗೆ ಬರುತ್ತಿಲ್ಲ. ಸೂರ್ಯಕುಮಾರ್ ಯಾದವ್ ಹೊರತುಪಡಿಸಿದರೆ ರಿಟೈನ್ ಮಾಡಿಕೊಂಡಿರುವ ಆಟಗಾರರ ಪ್ರದರ್ಶನ ಕಳಪೆಯಾಗಿದೆ. ಹರಾಜಿನಲ್ಲಿ ಕೊಂಡವರೂ ಕೂಡ ತಂಡಕ್ಕೆ ಗೆಲುವು ತಂದುಕೊಡುವ ಪ್ರದರ್ಶನ ತೋರುತ್ತಿಲ್ಲ.
ಆಟಗಾರರ ವೈಫಲ್ಯದ ಜೊತೆಗೆ ಮುಂಬೈಗೆ ಟಾಸ್ ಕೂಡ ಕೈಕೊಡುತ್ತಿದೆ. ಪುಣೆಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತಿದ್ದು, ಈ ಪಂದ್ಯದಲ್ಲಾದರೂ ಚೇಸಿಂಗ್ ಮಾಡುವ ಅವಕಾಶ ಸಿಕ್ಕರೆ ಮೊದಲ ಗೆಲುವು ಕಾಣುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಇಬ್ಬರು ವಿದೇಶಿಗರೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಇಂದು ಟಿಮ್ ಡೇವಿಡ್ಗೆ ಅವಕಾಶ ಕೊಡುವಂತೆ ತೋಚುತ್ತಿದೆ.