ಕರ್ನಾಟಕ

karnataka

By

Published : Apr 12, 2023, 9:26 AM IST

ETV Bharat / sports

ಕೊನೆಯ ಓವರ್​ ಥ್ರಿಲ್ಲರ್​ ಗೆದ್ದ ಮುಂಬೈಗೆ ಮೊದಲ ಗೆಲುವಿನ ಸಿಂಚನ: ಡೆಲ್ಲಿಗೆ 4 ನೇ ಸೋಲು

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕೊನೆಯ ಓವರ್​ನಲ್ಲಿ ಥ್ರಿಲ್ಲರ್​ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್​ ಈ ಬಾರಿಯ ಐಪಿಎಲ್​ನಲ್ಲಿ ಮೊದಲ ಗೆಲುವು ಸಾಧಿಸಿತು. ಡೆಲ್ಲಿ ಸೋಲಿನ ಹಾದಿ ಮುಂದುವರಿಸಿತು.

ಮುಂಬೈಗೆ ಮೊದಲ ಗೆಲುವಿನ ಸಿಂಚನ
ಮುಂಬೈಗೆ ಮೊದಲ ಗೆಲುವಿನ ಸಿಂಚನ

ಮುಂಬೈ:ಸತತ ಸೋಲುಗಳಿಂದ ಕಂಗೆಟ್ಟಿದ್ದ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ಕೊನೆಗೂ ಮೊದಲ ಜಯ ದಾಖಲಿಸಿದೆ. ಕೊನೆಯ ಓವರ್​ ಥ್ರಿಲ್ಲರ್​ನಲ್ಲಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್​​ಗಳ ಗೆಲುವು ಸಾಧಿಸಿತು. ಡೆಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಈ ಬಾರಿಯ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ತೀವ್ರ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದೆ. ನಾಯಕ ಡೇವಿಡ್​ ವಾರ್ನರ್​ ಹೊರತಾಗಿ ಯಾವೊಬ್ಬ ಆಟಗಾರನೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಈ ಪಂದ್ಯದಲ್ಲಿ ವಾರ್ನರ್​ ಮತ್ತು ಅಕ್ಷರ್​ ಪಟೇಲ್​ ಅರ್ಧಶತಕ ಬಾರಿಸಿದಾಗ್ಯೂ ತಂಡ 19.4 ಓವರ್​ಗಳಲ್ಲಿ 172 ರನ್​ಗೆ ಆಲೌಟ್​​ ಆಯಿತು. ಅಂತಿಮ ಓವರ್​ನಲ್ಲಿ ತಂಡ 4 ವಿಕೆಟ್​ ಕಳೆದುಕೊಂಡು, ದಿಢೀರ್​ ಕುಸಿತ ಕಂಡಿತು.

172 ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ಅದ್ಭುತ ಆರಂಭ ಪಡೆದರೂ ನಿರ್ಣಾಯಕ ಹಂತದಲ್ಲಿ ಗೊಂದಲಕ್ಕೀಡಾಗಿ ಸೋಲಿನ ಭೀತಿ ಎದುರಿಸಿತು. ಕೊನೆಯಲ್ಲಿ ಟಿಮ್​ ಡೇವಿಡ್​(13) ಮತ್ತು ಕ್ಯಾಮರೂನ್​ ಗ್ರೀನ್​(17) ತಂಡಕ್ಕೆ ಉಪಯುಕ್ತ ಕಾಣಿಕೆ ಗೆಲುವು ತಂದುಕೊಟ್ಟರು. ನಾಯಕ ರೋಹಿತ್​ ಶರ್ಮಾ ಮತ್ತು ಇಶಾನ್​ ಕಿಶನ್​ ಮೊದಲ ವಿಕೆಟ್​ಗೆ 71 ಸೇರಿಸ ಭರ್ಜರಿ ಆರಂಭ ನೀಡಿದರು.

31 ರನ್ ಗಳಿಸಿ ಆಡುತ್ತಿದ್ದ ಇಶಾನ್​ ಕಿಶನ್​ ರೋಹಿತ್​ ಶರ್ಮಾರ ತಪ್ಪಾದ ನಿರ್ಧಾರಕ್ಕೆ ಬಲಿಯಾದರು. ಒಂಟಿ ರನ್​ ಕದಿಯಲು ಯತ್ನಿಸುತ್ತಿದ್ದ ವೇಳೆ ಕಿಶನ್​ ರನೌಟ್​ ಆಗಿ ನಿರ್ಗಮಿಸಿದರು. ಬಳಿಕ ಬಂದ ತಿಲಕ್​ ವರ್ಮಾ 4 ಸಿಕ್ಸರ್​ ಸಮೇತ 41 ಸಿಡಿಸಿ ಮತ್ತೊಂದು ಜೊತೆಯಾಟ ನೀಡಿದರು. ಬಂದಷ್ಟೇ ವೇಗವಾಗಿ ಸೂರ್ಯಕುಮಾರ್​ ಯಾದವ್​ ಸೊನ್ನೆಗೆ ಔಟಾಗಿ ನಿರ್ಗಮಿಸಿದರು. ರೋಹಿತ್​ ಶರ್ಮಾ ರನ್​ ಕಲೆ ಹಾಕುವ ಭರದಲ್ಲಿ 65 ರನ್​ ಗಳಿಸಿದ್ದಾಗ ವಿಕೆಟ್​ ನೀಡಿದರು. ಇವರ ಇನಿಂಗ್ಸ್​ನಲ್ಲಿ 4 ಸಿಕ್ಸರ್​ 6 ಬೌಂಡರಿ ಇದ್ದವು.

ಕೊನೆಯಲ್ಲಿ ಕುತೂಹಲ:ಮುಂಬೈ ಇಂಡಿಯನ್ಸ್​ ತಂಡ ಗೆಲುವು ಸಾಧಿಸಲು ಕೊನೆಯ ಓವರ್​ನಲ್ಲಿ 5 ರನ್​ ಅಗತ್ಯವಿತ್ತು. ಆ್ಯನ್ರಿಚ್​ ನಾಟ್ಜೆ ಬಿಗುವಿನ ಬೌಲಿಂಗ್​ ಮಾಡಿದರು. ಕೊನೆಯ ಎಸೆತದಲ್ಲಿ 2 ರನ್​ ಬೇಕಿದ್ದಾಗ ಒತ್ತಡಕ್ಕೊಳಗಾದ ತಂಡ ಕೊನೆಗೂ ಓಟ ಮುಗಿಸಿ ಗೆಲುವು ಸಾಧಿಸಿತು. ಡೆತ್​ಓವರ್​ನಲ್ಲಿ ನಿಖರ ದಾಳಿ ನಡೆಸಿದಾಗ್ಯೂ ಡೆಲ್ಲಿ ಸೋಲು ಕಂಡಿತು

ವಾರ್ನರ್​ ಮೂರನೇ ಫಿಫ್ಟಿ:ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ಡೆಲ್ಲಿ ತಂಡ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ನಾಯಕ ಡೇವಿಡ್​ ವಾರ್ನರ್​(51) ಈ ಸೀಸನ್​ನಲ್ಲಿ ಆಡಿದ 4 ಪಂದ್ಯಗಳಲ್ಲಿ 3 ನೇ ಅರ್ಧಶತಕ ಬಾರಿಸಿದರು. ಪೃಥ್ವಿ ಶಾ 15, ಮನೀಶ್​ ಪಾಂಡೆ 26 ರನ್​ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆಲ್​ರೌಂಡರ್​ ಅಕ್ಷರ್​ ಪಟೇಲ್ ಭರ್ಜರಿ ಬ್ಯಾಟ್​ ಮಾಡಿದರು. 5 ಸಿಕ್ಸರ್​ 4 ಬೌಂಡರಿ ಸಮೇತ 54 ರನ್​ ಮಾಡಿ ಚೊಚ್ಚಲ ಅರ್ಧಶತಕ ಸಿಡಿಸಿದರು.

ಓದಿ:ಹರ್ಷಲ್​ ಪಟೇಲ್​ ಮಾಡಿದ ಮಂಕಡಿಂಗ್ ಔಟ್​ ಏಕಿಲ್ಲ? ಎಂಸಿಸಿ ಕಾನೂನು ಏನು?

ABOUT THE AUTHOR

...view details