ನವದೆಹಲಿ: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು,ಈಗಾಗಲೇ ಆಯೋಜನೆಗೊಂಡಿದ್ದ ಎಲ್ಲ ಕ್ರಿಕೆಟ್ ಟೂರ್ನಿ ಮುಂದೂಡಿಕೆಯಾಗಿವೆ. ಇದರ ಮಧ್ಯೆ ಮುಂಬರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ಕೂಡ ನಿಗದಿತ ವೇಳಾಪಟ್ಟಿಯಲ್ಲಿ ನಡೆಯುವುದು ಬಹುತೇಕ ಡೌಟ್. ಇದರ ಮಧ್ಯೆ ಅಕ್ಟೋಬರ್ ನಲ್ಲಿ ಮಹತ್ವದ ಭಾರತ-ಆಸ್ಟ್ರೇಲಿಯಾ ಸರಣಿ ನಡೆಯುವುದು ಕೂಡ ಅನುಮಾನ ಎಂದು ಹೇಳಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ಮಾಹಿತಿ ನೀಡಿದೆ.
ಮಹತ್ವದ ಭಾರತ-ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿದಂತೆ ಮಾತನಾಡಿರುವ ಬಿಸಿಸಿಐ ಖಂಜಾಚಿ ಅರುಣ್ ದುಮ್ಲಾ, ಒಂದು ವೇಳೆ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಕಾಂಗರೂ ಪಡೆ ವಿರುದ್ಧದ ಸರಣಿಯಲ್ಲಿ ಭಾಗಿಯಾದರೆ, ನಮ್ಮ ತಂಡ 12 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲು ಸಿದ್ಧವಾಗಿದೆ ಎಂದಿದ್ದಾರೆ. ಆದರೆ ಈ ವೇಳೆ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂಬುದು ಗೊತ್ತಿಲ್ಲ. ಆದರೆ ಪ್ರತಿ ಪ್ರವಾಸಕ್ಕೂ ಮುಂಚಿತವಾಗಿ ಆಟಗಾರರಿಗೆ ಕ್ವಾರಂಟೈನ್ ಮಾಡುವುದು ತುಂಬಾ ಕಷ್ಟ ಎಂದು ಅವರು ಹೇಳಿದ್ದಾರೆ.