ಬಹುಮುಖ ಪ್ರತಿಭೆ ಯತಿರಾಜ್ ಕಳೆದ 20 ವರ್ಷಗಳಿಂದ ಸಿನಿಮಾ, ಕಿರುತೆರೆ, ಬರವಣಿಗೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಇವರೊಬ್ಬ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಕೂಡಾ ಹೌದು.
ಕೊರೊನಾಗೆ ಸಂಬಂಧಿಸಿದಂತೆ ಯತಿರಾಜ್ ಮೂರು ಕಿರುಚಿತ್ರಗಳನ್ನು ಮಾಡಿದ್ದು ಇವು ಯೂಟ್ಯೂಬ್ನಲ್ಲಿ ಲಭ್ಯವಿದೆ. ಇದೀಗ ಸಾಮಾಜಿಕ ಕಳಕಳಿಯುಳ್ಳ 'ಸೌಂಡ್' ಎಂಬ ಕಿರುಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಈ ಕಿರುಚಿತ್ರ 4 ನಿಮಿಷ ಅವಧಿಯದ್ದಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ನಿರ್ಮಾಣ ಎಲ್ಲವನ್ನೂ ಯತಿರಾಜ್ ಅವರೇ ಮಾಡಿದ್ದಾರೆ. ಕಿರುಚಿತ್ರದ ಅವಧಿ 4 ನಿಮಿಷವಾದರೂ ಯತಿರಾಜ್ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ.
ಅಣ್ಣನೊಬ್ಬ ತಂಗಿ ಹುಟ್ಟುಹಬ್ಬಕ್ಕೆ ಗಿಫ್ಡ್ ಕೊಡಿಸುವ ಸಲುವಾಗಿ ಬಟ್ಟೆ ಅಂಗಡಿಗೆ ಕರೆದೊಯ್ಯತ್ತಾನೆ. ಬಟ್ಟೆ ಅಂಗಡಿಯಲ್ಲಿ ಮ್ಯೂಸಿಕ್ ಸೌಂಡ್ ಕಡಿಮೆ ಮಾಡುವಂತೆ ಅಂಗಡಿವರ ಮೇಲೆ ರೇಗಾಡುತ್ತಾನೆ. ಆಗ ತಂಗಿ ಆತನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ನಿನಗೆ ಈ ಸೌಂಡ್ ಕರ್ಕಶ ಎನಿಸುತ್ತದೆ. ಆದರೆ ನಿನ್ನ ಬೈಕ್ನಲ್ಲಿ ಸೈಲೆನ್ಸರ್ ಬಹಳ ಸದ್ದು ಮಾಡುವುದು ನಿನಗೆ ಕರ್ಕಶ ಎನಿಸುವುದಿಲ್ಲವಾ ಎಂದು ಪ್ರಶ್ನಿಸುತ್ತಾಳೆ. ಆಗ ಒಂದು ಒಂದು ಫ್ಲಾಶ್ಬ್ಯಾಕ್ ತೋರಿಸಲಾಗುತ್ತದೆ.
ಕೊನೆಗೆ ಅಣ್ಣ ತನ್ನ ತಪ್ಪಿನ ಅರಿವಾಗಿ ತಂಗಿ ಬಳಿ ಕ್ಷಮೆ ಕೇಳುತ್ತಾನೆ. ಅಲ್ಲದೆ ಬೈಕ್ನ ಸೈಲೆನ್ಸರ್ ಬದಲಿಸಿಕೊಳ್ಳಲು ನಿರ್ಧರಿಸುತ್ತಾನೆ. ಕೊನೆಯಲ್ಲಿ ಯತಿರಾಜ್ ಬಂದು ತಮ್ಮ ನಿರೂಪಣೆ ಮೂಲಕ ಕಿರುಚಿತ್ರವನ್ನು ಮುಗಿಸುತ್ತಾರೆ. ಅಣ್ಣ ತಂಗಿ ಪಾತ್ರದಲ್ಲಿ ಚಂದು, ಭೂಮಿಕಾ ನಟಿಸಿದ್ದಾರೆ. ಇವರೊಂದಿಗೆ ವಿದ್ಯಾಶ್ರೀ, ಸುನಿಲ್, ಪೂರ್ಣಿಮಾ ತಾರಾಗಣದಲ್ಲಿದ್ದಾರೆ. ಹಿರಿಯ ಛಾಯಾಗ್ರಾಹಕ ಆರ್. ಮನೋಹರ್ ಹಾಗೂ ಪತ್ರಕರ್ತ ಆರ್. ಚಂದ್ರಶೇಖರ್ ಕೂಡಾ ಒಂದು ಶಾಟ್ನಲ್ಲಿ ಕಾಣಿಸಿಕೊಂಡಿದ್ದಾರೆ.