ನಿನ್ನೆಯಷ್ಟೇ ದೇಶಾದ್ಯಂತ 72ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗಿದೆ. ಭಾರತ ಸರ್ಕಾರವು ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ಈಗಾಗಲೇ ಘೋಷಿಸಿದೆ. ಖ್ಯಾತ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಹಾಗೂ ಗಾಯಕಿ ಚಿತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಒಲಿದು ಬಂದಿದೆ.
ಇದನ್ನೂ ಓದಿ:ಪದ್ಮ ಪುರಸ್ಕಾರ 2021: ವಿಜೇತರ ಸಂಪೂರ್ಣ ಪಟ್ಟಿ ಇಂತಿದೆ..
ಎಸ್ಪಿಬಿ ಹಾಗೂ ಚಿತ್ರಾ ಅವರಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಗಾಯಕಿ ಚಿತ್ರಾ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. "ಭಾರತ ಸರ್ಕಾರದಿಂದ ನನಗೆ ಪದ್ಮಭೂಷಣ ನೀಡಲಾಗಿದೆ ಎಂಬುದನ್ನು ತಿಳಿದು ನನಗೆ ಬಹಳ ಸಂತೋಷವಾಯ್ತು. ನನ್ನದು 42 ವರ್ಷಗಳ ಸಂಗೀತ ಪಯಣ. ಈ ಸಮಯದಲ್ಲಿ ನನಗೆ ದಾರಿ ತೋರಿದ ತಂದೆ ತಾಯಿಗಳು, ನನ್ನ ಮ್ಯೂಸಿಕ್ ಟೀಮ್, ನನಗೆ ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು, ಸೌಂಡ್ ಇಂಜಿನಿಯರ್ಗಳನ್ನು ನೆನೆಸಿಕೊಳ್ಳಲು ನಾನು ಇಷ್ಟಪಡುತ್ತೇನೆ. ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದಿಂದಲೇ ಇದೆಲ್ಲಾ ಸಾಧ್ಯವಾದದ್ದು. ನಿಮ್ಮ ಬೆಂಬಲ ಹಾಗೂ ಪ್ರೀತಿ ಇದೇ ರೀತಿ ಸದಾ ಇರಲಿ" ಎಂದು ಚಿತ್ರಾ ಮಾತನಾಡಿದ್ದಾರೆ.