ನಿರ್ದೇಶಕ ದಯಾಳ್ ಪದ್ಮನಾಭನ್ ಬಿಗ್ಬಾಸ್ನಿಂದ ಹೊರಬಂದ ಮೇಲೆ ಸಾಲುಸಾಲು ಸಿನಿಮಾಗಳ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. 'ಹಗ್ಗದ ಕೊನೆ' ಸಿನಿಮಾದಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ದಯಾಳ್, ನಿರ್ಮಾಪಕರು ಸೋಲು ಅನುಭವಿಸದ ಹಾಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ.
'ರಂಗನಾಯಕಿ' ಬಿಡುಗಡೆಗೂ ಮುನ್ನವೇ 'ಒಂಬತ್ತನೇ ದಿಕ್ಕು' ಕಡೆ ಹೊರಟ ದಯಾಳ್ ಪದ್ಮನಾಭನ್
ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಸಿನಿಮಾ ಬಿಡುಗಡೆಗೂ ಮುನ್ನವೇ ದಯಾಳ್ ಪದ್ಮನಾಭನ್ 'ಒಂಬತ್ತನೇ ದಿಕ್ಕು' ಎಂಬ ಹೊಸ ಸಿನಿಮಾ ಆರಂಭಿಸಿದ್ದಾರೆ. ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯಕ್ಕೆ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಯಾಳ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಡಿ ಪಿಕ್ಚರ್ಸ್ ಹಾಗೂ ಕೆ9 ಸ್ಟುಡಿಯೋ ಜೊತೆ ಸೇರಿ 'ಒಂಬತ್ತನೇ ದಿಕ್ಕು' ಎಂಬ ಸಿನಿಮಾ ಆರಂಭಿಸುತ್ತಿದ್ದಾರೆ. ಸೆಪ್ಟಂಬರ್ 12 ರಂದು ಬೆಳಗ್ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಎದುರಿನ ಓಣಿ ಆಂಜನೇಯ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಆರಂಭವಾಗಲಿದೆ. 'ಆ ಕರಾಳ ರಾತ್ರಿ' ಹಾಗೂ 'ಪುಟ 109' ಸಿನಿಮಾಗಳ ಮುಹೂರ್ತವನ್ನು ಕೂಡಾ ದಯಾಳ್ ಇದೇ ದೇವಸ್ಥಾನದಲ್ಲಿ ನೆರವೇರಿಸಿದ್ದರು.
'ಒಂಬತ್ತನೇ ದಿಕ್ಕು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮುಹೂರ್ತದ ದಿನದಂದೇ ದಯಾಳ್ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು 'ರಂಗನಾಯಕಿ' ಚಿತ್ರದ ಮೊದಲ ವಿಡಿಯೋ ಹಾಡೊಂದನ್ನು ಸೆ. 13 ರಂದು ಬಿಡುಗಡೆ ಮಾಡಲಾಗುತ್ತಿದೆ. ಶ್ರೀ ತ್ಯಾಗರಾಜರ 'ಸೀತಾ ಕಲ್ಯಾಣ ವೈಭೋಗಮೆ' ಕೀರ್ತನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ವಿನಯ್ ಪಾಂಡವಪುರ ಈ ಹಾಡಿನೊಂದಿಗೆ ಕೆಲವೊಂದು ಹೊಸ ಸಾಲುಗಳನ್ನು ಸೇರಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಶ್ರೀನಿವಾಸ್ ಹಾಡಿದ್ದಾರೆ.