ಕರ್ನಾಟಕ

karnataka

By

Published : Jan 11, 2021, 5:38 PM IST

ETV Bharat / sitara

ಕನ್ನಡದ ಕೋಟ್ಯಾಧಿಪತಿ ಸ್ಪರ್ಧಿಗೆ ಬಹುಮಾನ ತಲುಪಿದ ದಾಖಲೆ ನೀಡಿದ ಖಾಸಗಿ ವಾಹಿನಿ

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿಯ 2019ರ ಸೀಸನ್‌ನ ಮೊದಲ ಸ್ಪರ್ಧಿ ಹೊನ್ನಾವರದ ದೀಪಾ ಶ್ರೀನಿವಾಸ್​ಗೆ ಮೋಸ ಆಗಿದೆ ಎಂಬ ವದಂತಿಗೆ ಖಾಸಗಿ ವಾಹಿನಿ ಸ್ಪಷ್ಟನೆ ಕೊಟ್ಟಿದೆ.

dsd
ದೀಪಾ ಶ್ರೀನಿವಾಸ್ ಬಹುಮಾನದ ಬಗ್ಗೆ ಸ್ಪಷ್ಟನೆ ಕೊಟ್ಟ ವಾಹಿನಿ

ಬೆಂಗಳೂರು: ಕನ್ನಡದ ಕೋಟ್ಯಾಧಿಪತಿಯ 2019ರ ಸೀಸನ್‌ನ ಮೊದಲ ಸ್ಪರ್ಧಿ ಹೊನ್ನಾವರದ ದೀಪಾ ಶ್ರೀನಿವಾಸ್​ಗೆ ಮೋಸ ಆಗಿದೆ ಎಂಬ ವದಂತಿಗೆ ಖಾಸಗಿ ವಾಹಿನಿ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದೆ.

ದೀಪಾ ಶ್ರೀನಿವಾಸ್ ಬಹುಮಾನದ ಬಗ್ಗೆ ಸ್ಪಷ್ಟನೆ ಕೊಟ್ಟ ವಾಹಿನಿ

ವಾಹಿನಿಯ ಸ್ಪಷ್ಟನೆ: "ಹೊನ್ನಾವರದ ದೀಪಾ ಶ್ರೀನಿವಾಸ್ ಕನ್ನಡದ ಕೋಟ್ಯಧಿಪತಿಯ 2019ರ ಸೀಸನ್‌ನ ಮೊದಲ ಸ್ಪರ್ಧಿ. ಮನೆಕಟ್ಟುವ ಕನಸಿನೊಂದಿಗೆ ಸ್ಪರ್ಧೆಗಿಳಿದ ಅವರು 12.5 ಲಕ್ಷ ರೂಪಾಯಿ ಗೆದ್ದರು. 2019 ನವೆಂಬರ್ 19ರಂದು ದೀಪಾ ಸಿಂಡಿಕೇಟ್‌ ಬ್ಯಾಂಕ್‌ನ ಖಾತೆಗೆ ಆದಾಯ ತೆರಿಗೆಯನ್ನು ಕಳೆದು ಉಳಿದ ಬಹುಮಾನದ ಮೊತ್ತ 8.75 ಲಕ್ಷ ರೂಪಾಯಿ ಸಂದಾಯವಾಯಿತು. ಭಾರತದ ತೆರಿಗೆ ಕಾನೂನುಗಳಂತೆ ದೀಪಾ ತಮ್ಮ ಬಹುಮಾನದ ಮೊತ್ತದಲ್ಲಿ 3.75 ಲಕ್ಷ ರೂಪಾಯಿಗಳ ತೆರಿಗೆ ಪಾವತಿಸಿದ್ದರು. ಇದಾದ ಒಂದೂಕಾಲು ವರ್ಷಗಳ ನಂತರ ಅಂದರೆ 2021ರ ಜನವರಿ 8ರಂದು ಪತ್ರಿಕೆಯೊಂದು ಅವರಿಗೆ ಬಹುಮಾನದ ಮೊತ್ತ ತಲುಪಿಯೇ ಇಲ್ಲ ಎಂಬ ಸುದ್ದಿ ಪ್ರಕಟಿಸಿತು." ಎಂದು ಖಾಸಗಿ ವಾಹಿನಿ ಹೇಳಿದೆ.

"ಅಸತ್ಯಗಳನ್ನು ಬಯಲಿಗೆಳೆಯುವ ಮಾಧ್ಯಮ ಸುಳ್ಳು ಹೇಳಿದಾಗ ಅದನ್ನು ಬಯಲಿಗೆ ತರುವ ಕರ್ತವ್ಯವೂ ಮಾಧ್ಯಮದ್ದೇ ಎಂಬುದು ನಮ್ಮ ವಾಹಿನಿಯ ನಂಬಿಕೆ. ದೀಪಾ ಶ್ರೀನಿವಾಸ್ ಗೆದ್ದ ಬಹುಮಾನದ ಮೊತ್ತ ಮತ್ತು ಅದಕ್ಕಾಗಿ ಪಾವತಿಸಿದ ತೆರಿಗೆಯ‌ ಮೊತ್ತವನ್ನು ಸ್ಪಷ್ಟಪಡಿಸುವ ತೆರಿಗೆ ಇಲಾಖೆಯ ದಾಖಲೆ ಇಲ್ಲಿದೆ. 2019ರಲ್ಲಿ ಪ್ರಸಾರವಾದ “ಕನ್ನಡದ ಕೋಟ್ಯಧಿಪತಿ” ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಿಗೆ ದಾನವಾಗಿ ನೀಡಲು ಆಟವಾಡಿದ ವಿಶೇಷ ಅತಿಥಿಗಳನ್ನು ಹೊರತುಪಡಿಸಿದರೆ ಒಟ್ಟು ಅರವತ್ತು ಮಂದಿ ಸ್ಪರ್ಧಿಗಳು ಬಹುಮಾನ ಗೆದ್ದಿದ್ದಾರೆ. ತೆರಿಗೆಯನ್ನು ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ಇವರೆಲ್ಲರ ಖಾತೆಗಳಿಗೆ ವರ್ಗಾಯಿಸಲಾಗಿದೆ. ದಾನ ನೀಡುವುದಕ್ಕಾಗಿಯೇ ಆಡಿದ ಎಲ್ಲಾ ಸ್ಪರ್ಧಿಗಳ ಬಹುಮಾನದ ಮೊತ್ತವನ್ನು ಅವರು ಸೂಚಿಸಿದ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗಿದೆ." ಎಂದು ಖಾಸಗಿ ವಾಹಿನಿ ಸ್ಪಷ್ಟಪಡಿಸಿದೆ.

ABOUT THE AUTHOR

...view details