ಕೊರೊನಾದಿಂದ ಕಷ್ಟದಲ್ಲಿದ್ದ, ಕೂಲಿ ಕಾರ್ಮಿಕರು ಹಾಗು ಚಿತ್ರರಂಗದ ಪೋಷಕ ಕಲಾವಿದರಿಗೆ ಚಿತ್ರರಂಗದಲ್ಲಿ ಕೆಲ ತಾರೆಯರು ನೆರವು ನೀಡುತ್ತಿದ್ದಾರೆ. ಇದೇ ಹಾದಿಯಲ್ಲಿ ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ತಮ್ಮ ಕೈಲಾದ ಸಹಾಯ ನೀಡಲು ಮುಂದಾಗಿದ್ದಾರೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ, 'ಪೈಲ್ವಾನ್' ಹಸಿದವರ ಹಾಗು ನೊಂದವರ ಸಹಾಯಕ್ಕೆ ಬರ್ತಾ ಇದ್ದಾರೆ. ಇದೀಗ ಪಾಠ ಕಲಿಸುವ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಲು ಸಜ್ಜಾಗಿದ್ದಾರೆ.
ಹೌದು, ವಿದ್ಯೆ ಕಲಿಸುವ ಗುರುಗಳಿಗೆ, 'ನೀವು ರೂಪಿಸಿದ ಈ ವ್ಯಕ್ತಿತ್ವ.. ನೀವು ಕಲಿಸಿದ ವಿದ್ಯೆ.. ನೀವು ಕಲಿಸಿದ ಮಾತುಗಳು.. ಎಲ್ಲವನ್ನು ಗೌರವ ಮತ್ತು ಪ್ರೀತಿಯಿಂದ ನಿಮಗೆ ಹಿಂದಿರುಗಿಸುವ ಸಮಯ. ಹೀಗಾಗಿ ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜತೆ ನಾವಿದ್ದೇವೆ ಅನ್ನುವ ಸಮಯ.' ಎಂದು ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಗುರುಗಳಿಗೆ ನೆರವು ನೀಡಲು ಮುಂದಾಗಿದ್ದಾರೆ.
ಈ ಅಭಿಯಾನದಲ್ಲಿ ಕರ್ನಾಟಕದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಾಗುವುದು. ಮೊದಲನೇ ಹಂತದಲ್ಲಿ 50 ಶಿಕ್ಷಕರಿಗೆ ತಲಾ 2000 ರೂಪಾಯಿ ಧನಸಹಾಯ ಮಾಡುವುದಾಗಿ ತಿಳಿಸಲಾಗಿದೆ. ನೀವು ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರೆ 6360334455 ಈ ಸಂಖ್ಯೆಗೆ ಕರೆ ಮಾಡಿ. ನಾವು ನಿಮಗೆ ಸಹಾಯ ಮಾಡಲು ಸಿದ್ಧ ಎಂದಿದೆ ಕಿಚ್ಚನ ತಂಡ.