ಕರ್ನಾಟಕ

karnataka

ETV Bharat / jagte-raho

ಮಹಾನಾಟಕವಾಡಿ ವೃದ್ಧೆಯ ಆಭರಣ ಎಗರಿಸಿದ ಕಳ್ಳ!

ಪರ್ಸ್ ಕಳವಾಗಿದೆಯೆಂದು ಆಣೆ ಪ್ರಮಾಣದ ನಾಟಕವಾಡಿ ಕಳ್ಳನೊಬ್ಬ ವೃದ್ಧೆಯ ಚಿನ್ನದ ಆಭರಣಗಳನ್ನು ಎಗರಿಸಿದ ಘಟನೆ ಚಾಮರಾಜನಗರದ ಯಳಂದೂರಿನಲ್ಲಿ ನಡೆದಿದೆ. ಯಾಮಾರಿದ ಅಜ್ಜಿ ಆಭರಣ ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾಳೆ.

By

Published : Aug 7, 2019, 10:05 AM IST

ಸಿನಿಮಾ ಸ್ಟೈಲಲ್ಲಿ ವೃದ್ಧೆಯ ಆಭರಣ ಎಗರಿಸಿದ ಕಳ್ಳ : ಕೊಟ್ಟು ಕೋಡಂಗಿಯಾದ ಅಜ್ಜಿ!

ಚಾಮರಾಜನಗರ: ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ವೃದ್ಧೆಯೊಬ್ಬರು ತನ್ನ ಆಭರಣವನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ.

ಯಳಂದೂರು ತಾಲೂಕು ಗುಂಬಳ್ಳಿ ಗ್ರಾಮದ ಜಯಮ್ಮಣ್ಣಿ (70) ಮೋಸ ಹೋದ ವೃದ್ಧೆ. ಯಾಮಾರಿಸಿದ ಕಳ್ಳ ಆಕೆಯ ಬಳಿಯಿದ್ದ 4 ಚಿನ್ನದ ಬಳೆ, 35 ಗ್ರಾಂ ತೂಕದ ಸರವನ್ನು ಎಗರಿಸಿದ್ದಾನೆ. ಖತರ್ನಾಕ್ ಕಳ್ಳನ ನಾಟಕಕ್ಕೆ ವೃದ್ಧೆ ಲಕ್ಷಾಂತರ ರೂ. ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.

ಚಿನ್ನ ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ವೃದ್ಧೆ

ಘಟನೆಯ ವಿವರ: ಜಯಮ್ಮಣಿ ಯಳಂದೂರಿನ ಎಂಡಿಸಿಸಿ ಬ್ಯಾಂಕ್​​ಗೆ ತೆರಳುತ್ತಿದ್ದಾಗ ಅಪರಿಚಿತ ಮಹಿಳೆಯೋರ್ವಳು ಅವರೊಂದಿಗೆ ಜೊತೆಯಾಗಿದ್ದಾಳೆ. ಜೋರಾಗಿ ಮಳೆ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ನಿಂತು ಹೊರಡೋಣ ಬನ್ನಿ ಎಂದು ಆ ಮಹಿಳೆ ವೃದ್ಧೆಗೆ ಹೇಳುತ್ತಾಳೆ. ಹಾಗೆ ಇಬ್ಬರು ದಾರಿಬದಿ ಇದ್ದ ಮನೆ ಮುಂದೆ ಕುಳಿತಿದ್ದರು. ಈ ವೇಳೆ ವ್ಯಕ್ತಿವೊಬ್ಬ ಬಂದು ನನ್ನ ಪರ್ಸ್ ಕಳವಾಗಿದೆ, ನಿಮಗೇನಾದರು ಸಿಕ್ಕಿದೆಯಾ ಎಂದು ಕೇಳುತ್ತಾನೆ. ಆಗ ಇಬ್ಬರೂ ಸಿಕ್ಕಿಲ್ಲ ಎನ್ನುತ್ತಾರೆ.

ನಿಮ್ಮ ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡಿ ಎಂದು ವೃದ್ಧೆಯೊಂದಿಗೆ ಬಂದಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಹೇಳುತ್ತಾನೆ. ಆಕೆ ಮಾಂಗಲ್ಯ ಬಿಚ್ಚಿ ಪೇಪರ್​​ನಲ್ಲಿ ಸುತ್ತಿ ಪರ್ಸ್ ಸಿಕ್ಕಿಲ್ಲವೆಂದು ಪ್ರಮಾಣ ಮಾಡುತ್ತಾಳೆ. ಬಳಿಕ, ವೃದ್ಧೆಯನ್ನೂ ಪ್ರಮಾಣ ಮಾಡಿ ಎಂದಾಗ ಬಳೆ, ಸರ ಬಿಚ್ಚಿ ಪೇಪರ್​ನಲ್ಲಿ ಸುತ್ತಿ ಪ್ರಮಾಣ ಮಾಡುತ್ತಾಳೆ. ಈ ವೇಳೆ, ಸೀರೆ ಸೆರಗಿಗೆ ಆಭರಣದ ಪೊಟ್ಟಣ ಕಟ್ಟುತ್ತೇನೆಂದು ಹೇಳಿ ಬರೀ ಕಾಗದ ಕಟ್ಟಿ ಇಬ್ಬರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆಣೆ-ಪ್ರಮಾಣದ ನಾಟಕಕ್ಕೆ ವೃದ್ಧೆಯ ಲಕ್ಷಾಂತರ ರೂ. ಮೌಲ್ಯದ ಬಂಗಾರ ಮಾಯವಾಗಿದ್ದು, ಯಾಮಾರಿದ ವೃದ್ಧೆ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ABOUT THE AUTHOR

...view details