ಕರ್ನಾಟಕ

karnataka

By

Published : Aug 31, 2022, 7:43 AM IST

Updated : Sep 1, 2022, 1:54 PM IST

ETV Bharat / international

ಯುಎಸ್​ಎಸ್​ಆರ್​ ಕೊನೆಯ ನಾಯಕ, ಶೀತಲ ಸಮರ ಮುಗಿಸಿದ ಮಿಖಾಯಿಲ್​ ಗೋರ್ಬಚೆವ್​ ನಿಧನ

ಯುಎಸ್ಎಸ್​ಆರ್​ನ ಕೊನೆಯ ಅಧ್ಯಕ್ಷ, ರಷ್ಯಾದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ ನಾಯಕ ಮಿಖಾಯಿಲ್​ ಗೋರ್ಬಚೆವ್​ ಅವರು ಅನಾರೋಗ್ಯದಿಂದ ಇಂದು ನಿಧನರಾದರು. ಅಮೆರಿಕದೊಂದಿಗಿನ ಶೀತಲಸಮರ ಕೊನೆಗೊಳಿಸಿದ ಕೀರ್ತಿ ಇವರಿಗಿದೆ.

Mikhail Gorbachev
ಮಿಖಾಯಿಲ್​ ಗೋರ್ಬಚೆವ್​ ನಿಧನ

ಮಾಸ್ಕೋ (ರಷ್ಯಾ):ಸೋವಿಯತ್​ ಒಕ್ಕೂಟದ ಕೊನೆಯ, ಶೀತಲ ಸಮರ ಕೊನೆಗೊಳಿಸಿದ ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್​ ಗೋರ್ಬಚೆವ್ ತಮ್ಮ 91 ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದರು. ಗೋರ್ಬಚೇವ್ ಅವರು ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಇಹಲೋಕ ತ್ಯಜಿಸಿದರು.

ಮಿಖಾಯಿಲ್ ಗೋರ್ಬಚೇವ್ ಅವರು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ (ಯುಎಸ್ಎಸ್ಆರ್) ಕೊನೆಯ ಅಧ್ಯಕ್ಷರಾಗಿದ್ದರು. ಯುಎಸ್​ಎಸ್​ಆರ್​ ವಿಭಜನೆಗೊಂಡು 1991 ರ ದಂಗೆಯ ನಂತರ ಅವರು ಅಧಿಕಾರ ಕಳೆದುಕೊಂಡರು. ನಾಗರಿಕರಿಗೆ ಸ್ವಾತಂತ್ರ್ಯವನ್ನು ನೀಡುವ ಮೂಲಕ ಪ್ರಜಾಸತ್ತಾತ್ಮಕ ತತ್ವಗಳ ಸಾಲಿನಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ನಡೆಸಿದ ವ್ಯಕ್ತಿಯಾಗಿದ್ದಾರೆ. 1985 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ಈ ಹಿಂದಿನ ಅಧ್ಯಕ್ಷರು ಮೊಟಕುಗೊಳಿಸಿದ್ದ ವಾಕ್ ಸ್ವಾತಂತ್ರ್ಯದ ನೀತಿಯನ್ನು ಸುಧಾರಿಸಿದರು.

ಗೋರ್ಬಚೇವ್ ಅವರು ಪೆರೆಸ್ಟ್ರೋಯಿಕಾ ಅಥವಾ ಪುನರ್ರಚನೆ ಎಂಬ ಆರ್ಥಿಕ ಸುಧಾರಣೆಯ ಕಾರ್ಯಕ್ರಮ ಪ್ರಾರಂಭಿಸಿ, ಸೋವಿಯತ್ ಆರ್ಥಿಕತೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದರು. ಪತ್ರಿಕಾ ಸ್ವಾತಂತ್ರ್ಯ ಮತ್ತು ಕಲೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಿಖಾಯಿಲ್​ ಗೋರ್ಬಚೆವ್​ ಅವರು ಅಮೆರಿಕದ ಜೊತೆಗೆ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ ಮಾಡಿಕೊಂಡರು. ಇದು ಅವರನ್ನು ಹೆಚ್ಚು ಗುರುತಿಸುವಂತೆ ಮಾಡಿತು. ಇದು ಅವರಿಗೆ 1990 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ತಂದುಕೊಟ್ಟಿತು.

1989 ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಪ್ರಜಾಪ್ರಭುತ್ವದ ಪರವಾದ ಪ್ರತಿಭಟನೆಗಳು ವ್ಯಾಪಕವಾದಾಗ ಗೋರ್ಬಚೇವ್ ಸೇನಾ ಬಲವನ್ನು ಪ್ರಯೋಗಿಸದೇ ಹೋರಾಟಕ್ಕೆ ಮನ್ನಣೆ ನೀಡಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಜನರಿಗೂ ಹಕ್ಕುಗಳನ್ನು ನೀಡಿದರು. 1991 ರ ಆಗಸ್ಟ್​​ನಲ್ಲಿ ಗೋರ್ಬಚೆವ್​ ವಿರುದ್ಧ ತೀವ್ರ ದಂಗೆ ನಡೆಸಲಾಯಿತು. ಇದರಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಡಿಸೆಂಬರ್ 25, 1991 ರಂದು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು.

ವ್ಲಾಡಿಮಿರ್​ ಪುಟಿನ್, ಪ್ರಧಾನಿ ನರೇಂದ್ರ ಮೋದಿ​ ಸಂತಾಪ:ಮಾಜಿ ಅಧ್ಯಕ್ಷ ಮಿಖಾಯಿಲ್​ ಗೋರ್ಬಚೇವ್ ಅವರ ನಿಧನಕ್ಕೆ ಈಗಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಗೋರ್ಬಚೇವ್ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

ಓದಿ:50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ನಾಸಾ ಪಯಣ..ಶನಿವಾರ ಮತ್ತೆ ಮೂನ್​ ರಾಕೆಟ್​ ಉಡ್ಡಯನ

Last Updated : Sep 1, 2022, 1:54 PM IST

ABOUT THE AUTHOR

...view details