ಕರ್ನಾಟಕ

karnataka

ETV Bharat / international

ನೈಜೀರಿಯಾದಲ್ಲಿ ದೋಣಿ ಮುಳುಗಿ 24 ಮಂದಿ ಸಾವು, ಹಲವರು ನಾಪತ್ತೆ

ನೈಜೀರಿಯಾದಲ್ಲಿ ದೋಣಿ ಮುಳುಗಿ 24 ಮಂದಿ ಸಾವನ್ನಪ್ಪಿದ್ದು, 30 ಜನರನ್ನು ರಕ್ಷಿಸಲಾಗಿದೆ.

By PTI

Published : Sep 11, 2023, 9:40 AM IST

A boat capsizing in north-central Nigeria
ನೈಜೀರಿಯಾ ದೋಣಿ ದುರಂತ

ಅಬುಜಾ (ನೈಜೀರಿಯಾ):ನೈಜೀರಿಯಾದಲ್ಲಿ ಭಾನುವಾರ ಮುಂಜಾನೆ ದೋಣಿ ಮುಳುಗಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೋಣಿಯು 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಮೋಕ್ವಾ ಜಿಲ್ಲೆಯ ನೈಜೀರಿಯಾದ ನೈಜರ್‌ ಎಂಬಲ್ಲಿ ಮರದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಜರುಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಝೈನಾಬ್ ಸುಲೈಮಾನ್ ತಿಳಿಸಿದ್ದಾರೆ.

ರಾಜಧಾನಿ ಮಿನ್ನಾದಿಂದ 251 ಕಿಲೋಮೀಟರ್ (156 ಮೈಲುಗಳು) ದೂರದಲ್ಲಿ ಗ್ಬಾಜಿಬೋ ಸಮುದಾಯದವರು ವಾಸಿಸುತ್ತಿರುವ ನೈಜರ್ ನದಿಯಲ್ಲಿ ದೋಣಿ ಮಗುಚಿದೆ. ಇಲ್ಲಿಯವರೆಗೆ ಒಟ್ಟು 24 ಶವಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು 30 ಜನರನ್ನು ರಕ್ಷಿಸಲಾಗಿದೆ. ದೋಣಿ ಮುಳುಗಲು ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಓವರ್‌ಲೋಡ್ ಸಮಸ್ಯೆಯಿಂದ ದುರಂತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ ಎಂದು ಸುಲೈಮಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ದೋಣಿ ದುರಂತಗಳು ಸಾಮಾನ್ಯವಾಗಿದೆ. ಇಲ್ಲಿ ಸ್ಥಳೀಯವಾಗಿ ತಯಾರಿಸಿದ ಹಡಗುಗಳನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ. ಕಳೆದ ಮೂರು ತಿಂಗಳ ಹಿಂದೆ ನೈಜೀರಿಯಾದಲ್ಲಿ ಸಹ ಅತ್ಯಂತ ಭೀಕರ ದೋಣಿ ದುರಂತ ಸಂಭವಿಸಿತ್ತು. ಈ ವೇಳೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಸಾರಿಗೆಯಲ್ಲಿ ಸುಧಾರಣೆ ಕೈಗೊಳ್ಳದ ಕಾರಣ ಮತ್ತೆ ಇಂತಹ ಘಟನೆಗಳು ಮರುಕಳಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ :ಕೇರಳದಲ್ಲಿ ಸ್ಪರ್ಧೆ ವೇಳೆ ಮುಳುಗಿದ ಹಡಗು : ಅಪಾಯದಲ್ಲಿದ್ದ 20 ಜನರ ರಕ್ಷಿಸಿದ ಭಾರತೀಯ ನೌಕಾಪಡೆ

ದೋಣಿ ಮಗುಚಿ ಐವರು ದಾರುಣ ಸಾವು (ಇತ್ತೀಚಿನ ಘಟನೆ): ಬಿಹಾರದ ದರ್ಭಾಂಗಾನಲ್ಲಿ ದೋಣಿ ಮುಳುಗಿ ಐವರು ಸಾವನ್ನಪ್ಪಿರುವ ಘಟನೆ ಸೆಪ್ಟೆಂಬರ್​ 6 ನೇ ತಾರೀಖಿನಂದು ನಡೆದಿದೆ. ಕಮಲಾ ನದಿಯಲ್ಲಿ ದೋಣಿ ಮಗುಚಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಮಕ್ಕಳು ಮೃತಪಟ್ಟಿದ್ದರು. ಝಜ್ರಾ ಮತ್ತು ಗಧೇಪುರ ನಡುವಿನ ಶಹಪುರ್ ಚೌರ್‌ ಎಂಬಲ್ಲಿ ಘಟನೆ ನಡೆದಿತ್ತು. ಮಾಹಿತಿ ಪಡೆದು ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದಿದ್ದರು. ಮೃತರು ಜಗತರ್ಣಿ ದೇವಿ (55), ಪುಲ್ಪರಿ ದೇವಿ (60), ಸೋನಾಲಿ ಕುಮಾರಿ (13), ಕಲ್ಪನಾ ಕುಮಾರಿ (12) ಮತ್ತು ಸೋನಿಯಾ ಕುಮಾರಿ (11) ಎಂದು ತಿಳಿದುಬಂದಿದೆ.

ಇದನ್ನೂ ಓದಿ :ದೋಣಿ ಮಗುಚಿ ಮೂವರು ಮಕ್ಕಳು , ಇಬ್ಬರು ಮಹಿಳೆಯರು ಸೇರಿ ಐವರ ದಾರುಣ ಸಾವು

ABOUT THE AUTHOR

...view details