ಕುರುಚಲು ಗಡ್ಡ, ಮೂಗಿಗೆ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ. ಇದು ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ 'ಟೋಬಿ' ಸಿನಿಮಾದ ಫಸ್ಟ್ ಲುಕ್ ವಿಶೇಷ. ತಮ್ಮ ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರ ಸದ್ಯ ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.
ಕತೆಗಾರ ಟಿ.ಕೆ. ದಯಾನಂದ್ ಹೇಳುವ ಹಾಗೆಯೇ ಟೋಬಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಾನು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ನೀವು ಒಬ್ಬರನ್ನು ನೋಡಿದಾಗ ಇವರು ಇಂತಹವರು ಅಂತ ಹೇಳಬಹುದು. ಆದರೆ, ಈ ವ್ಯಕ್ತಿಯನ್ನು ಆ ರೀತಿ ಹೇಳಲಾಗದು. ನಾನು ಆತನ ಕುರಿತು ಕಥೆ ಬರೆದಿದ್ದೇನೆ. ಅದುವೆ ಟೋಬಿ ಅಂತಾರೆ ದಯಾನಂದ್.
ಟೋಬಿ ಅವತಾರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಮಾತನಾಡಿ, ''ಸಿನಿಮಾ ನೋಡಲು ಬಂದ ಪ್ರೇಕ್ಷಕನಿಗೆ ಮೊದಲು ಸಿನಿಮಾ ಇಷ್ಟ ಆಗಬೇಕು. ನನಗೆ ಅಂತಹ ಸಿನಿಮಾ ಮಾಡುವ ಆಸೆ. ಟೋಬಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಎನ್ನಬಹುದು. ನೀವು ಫಸ್ಟ್ ಲುಕ್ನಲ್ಲಿ ನೋಡುತ್ತಿರುವುದು ಚಿತ್ರದ ಒಂದು ಭಾಗವಷ್ಟೆ. ಇಡೀ ಚಿತ್ರ ಈ ರೀತಿ ಇರುವುದಿಲ್ಲ. ನನಗೆ ಈ ಚಿತ್ರದ ಕಥೆ ಹೊಸತು ಎನಿಸಿತು. ನನ್ನ ಪಾತ್ರ ಕೂಡ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ನನಗೆ ಗೊತ್ತಿಲ್ಲದ ವಿಷಯವನ್ನು ಕಲಿತು ಈ ಚಿತ್ರದಲ್ಲಿ ಹೇಳಿದ್ದೇನೆ'' ಅಂತಾರೆ.
ಇದೇ ಮೊದಲ ಬಾರಿಗೆ ಟೋಬಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ಇಬ್ಬರು ನಾಯಕಿಯರಾಗಿ ಸಂಯುಕ್ತ ಹೊರನಾಡು ಹಾಗೂ ಚೈತ್ರಾ ಆಚಾರ್ ಜೊತೆಯಾಗಿದ್ದಾರೆ. ಅಲ್ಲದೆ, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಶ್ರೀಕಾಂತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.