ನವದೆಹಲಿ:ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ನಟನೆಯ ಹಿಂದು ಧರ್ಮದ ಶ್ರೇಷ್ಠ ಮಹಾಕಾವ್ಯ ರಾಮಾಯಣ ಆಧಾರಿತ 'ಆದಿಪುರುಷ' ಸಿನಿಮಾದ ಸಂಭಾಷಣೆಗಳು ವಿವಾದಕ್ಕೀಡಾಗಿ ಟೀಕೆಗೆ ಗುರಿಯಾಗಿವೆ. ಹಿಂದು ದೇವರು ಅದರಲ್ಲೂ ಚಿರಂಜೀವಿ ಹನುಮಂತನನ್ನು ಅವಮಾನಿಸುವ ರೀತಿಯಲ್ಲಿ ಡೈಲಾಗ್ ಹೇಳಿಸಲಾಗಿದೆ. ಇದಕ್ಕೆ ಹಲವು ರಾಜಕಾರಣಿಗಳು, ನಟರು ಹಾಗೂ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ರಾಮಾಯಣದಂತಹ ಪವಿತ್ರ ಮಹಾಕಾವ್ಯವನ್ನು ಆಧರಿಸಿದ ಚಿತ್ರಕ್ಕೆ ಹೊಂದಿಕೆಯಾಗದ ಟಪೋರಿ ಭಾಷೆಯನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ಇದು ಹೊಸ ಯುಗದ ರಾಮಾಯಣವಾಗಿದೆ. ಆಡುಮಾತಿನ ಭಾಷೆಯನ್ನು ಬಳಸಲಾಗಿದೆ. ಇದರಿಂದ ಹೆಚ್ಚು ಜನರಿಗೆ ಅದು ತಲುಪಲಿದೆ. ರಾಮಾಯಣದ ಪುರಾಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದಿತ್ತು. ಇದೀಗ ಈ ವಿವಾದದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಕೂಡ ಎಂಟ್ರಿ ನೀಡಿದ್ದಾರೆ.
ಸೋನು ನಿಗಮ್ ಟ್ವೀಟ್: ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರ ಟ್ವೀಟ್ ಅನ್ನು ಹಿನ್ನೆಲೆಯಲ್ಲಿ ಸೋನು ನಿಗಮ್ ರಿಟ್ವೀಟ್ ಮಾಡಿ, 'ಈ ದೇಶಕ್ಕೆ ಅಪಾಯ ಇರುವುದು ಇಬ್ಬರಿಂದ ಮಾತ್ರ.. ಒಬ್ಬರು ಜಾತಿವಾದಿಗಳು ಮತ್ತೊಬ್ಬರು ಜಮಾತ್ ಜನರು'. ದೇವರು ಅಂಥವರಿಗೆ ಬುದ್ಧಿ ಕೊಡಲಿ' ಎಂದು ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ನಲ್ಲಿ ಅಭಿಷೇಕ್ ಬರೆದುಕೊಂಡಿದ್ದಾರೆ.
ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರು ಆದಿಪುರುಷ ಸಿನಿಮಾವನ್ನು ಉಲ್ಲೇಖಿಸಿ, 'ನೀವೆಲ್ಲರೂ ಚಿತ್ರವನ್ನು ಸಾಧ್ಯವಾದಷ್ಟು ವಿರೋಧಿಸಿ ಅಥವಾ ಬೆಂಬಲಿಸಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ, ಬ್ರಾಹ್ಮಣ ಸಮಾಜದ ಉದಯೋನ್ಮುಖ ಮುಖವಾದ ಮನೋಜ್ ಮುಂತಾಶಿರ್ ಅವರನ್ನು ವಿರೋಧಿಸಿದಾಗ ಮಾತ್ರ ನಿಮಗೆ ತಕ್ಕ ಉತ್ತರ ಸಿಗುತ್ತದೆ' ಎಂದು ಬರೆದುಕೊಂಡಿದ್ದರು. ಇವರ ಜಾತಿ ಆಧರಿತ ಟೀಕೆಯನ್ನು ಸೋನು ನಿಗಮ್ ವಿರೋಧಿಸಿದ್ದಾರೆ.