ಕರ್ನಾಟಕ

karnataka

ರಾಜ್ಯಾದ್ಯಂತ 'ಟೋಬಿ' ಕ್ರೇಜ್​: ಸಿನಿಮಾ ಪ್ರಮೋಷನ್‌ನಲ್ಲಿ ಶೆಟ್ರು ಸಖತ್​ ಬ್ಯುಸಿ

By ETV Bharat Karnataka Team

Published : Aug 21, 2023, 7:53 PM IST

Raj B Shetty starrer Toby Movie: ಬಹುನಿರೀಕ್ಷಿತ 'ಟೋಬಿ' ಸಿನಿಮಾದ ಪ್ರಮೋಷನ್​ ಕಾರ್ಯದಲ್ಲಿ ನಟ ರಾಜ್​ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ.

toby
ಟೋಬಿ

ಕರ್ನಾಟಕದಾದ್ಯಂತ ಎಲ್ಲಿ ನೋಡಿದ್ರೂ 'ಟೋಬಿ' ಸಿನಿಮಾದ್ದೇ ಕ್ರೇಜ್​. ಟ್ರೇಲರ್​ನಿಂದಲೇ ಸೌತ್​ ಇಂಡಸ್ಟ್ರಿಯಲ್ಲಿ ಸಖತ್​ ಹವಾ ಕ್ರಿಯೇಟ್​ ಮಾಡಿದೆ. 'ನಾನು ನೋಡೋದಕ್ಕೆ ಸಿಂಪಲ್​ ಆದ್ರೂ ನನ್ನಲ್ಲೊಬ್ಬ ಮಾಸ್​ ನಟನಿದ್ದಾನೆ' ಅನ್ನೋದನ್ನು ಈ ಚಿತ್ರದ ಮೂಲಕ ರಾಜ್​ ಬಿ. ಶೆಟ್ಟಿ ಪ್ರೂವ್​ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರು ಟೋಬಿ ಟ್ರೇಲರ್​ ನೋಡಿ ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಬರುವ ಪ್ರತಿ ಸಂಭಾಷಣೆಗಳು ಸಿನಿಮಾ ಮೇಲಿನ ಅಭಿಮಾನಿಗಳ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ.

'ಹರಕೆ ಕುರಿಯೊಂದು ತಪ್ಪಿಸಿಕೊಂಡಿದೆ. ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡಿರುವ ಕುರಿ ವಾಪಸ್​ ಬರಬಾರದು. ಬಂದರೆ ಅದು ಕುರಿಯಾಗಿರುವುದಿಲ್ಲ, ಮಾರಿಯಾಗಿರುತ್ತದೆ' ಎಂಬ ಪಂಚಿಂಗ್​ ಡೈಲಾಗ್​ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಜೊತೆಗೆ, 'ಟೋಬಿ ಕಣ್ಣು ಮುಚ್ಚಿದರೆ ಒಳ್ಳೇದಿತ್ತು, ಆದರೆ ಅವನು ಕಣ್ಣು ಬಿಟ್ಟಾಗಿತ್ತು' ಎಂಬ ಸಂಭಾಷಣೆ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

ಟೋಬಿ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ ಮೂರು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ದೃಷ್ಟಿಯಿಂದ ರಿಯಲ್​ ಆಗಿ ಮೂಗಿಗೆ ಮೂಗುತ್ತಿ ಚುಚ್ಚಿಕೊಂಡು ಅವರು ಅಭಿನಯಿಸಿರೋದು ನೋಡಿದ್ರೆ ಅವರ ಡೆಡಿಕೇಷನ್​ ಎಂತಹದ್ದು ಅನ್ನೋದು ಗೊತ್ತಾಗುತ್ತೆ. ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಟೋಬಿ ಚಿತ್ರತಂಡ ರಾಜ್​ ಬಿ. ಶೆಟ್ಟಿಯ ಪಾತ್ರದ ಬಗ್ಗೆ ಕಲರ್‌ಫುಲ್​ ಮೇಕಿಂಗ್ ಅನ್ನು ರಿವೀಲ್​ ಮಾಡಿದೆ.

ಅಷ್ಟೇ ಅಲ್ಲ, ಟೋಬಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರೀಚ್​ ಮಾಡಲು ರಾಜ್​ ಬಿ.ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಭರ್ಜರಿ ಪ್ರಮೋಷನ್​ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಶೆಟ್ರಿಗೆ ಸಿಕ್ಕ ರೆಸ್ಪಾನ್ಸ್​. ಸಹಜವಾಗಿ ಉತ್ತರ ಕರ್ನಾಟಕದ ಜನತೆಗೆ ಟೋಬಿ ಚಿತ್ರದ ಮೇಲೆ ಎಷ್ಟು ಕ್ರೇಜ್​ ಇದೆ ಅನ್ನೋದಕ್ಕೆ ಈ ದೃಶ್ಯಗಳೇ ಉದಾಹರಣೆ.

'ಟೋಬಿ'ಯಲ್ಲಿ ಬಣ್ಣ ಹಚ್ಚಿದವರು:'ಟೋಬಿ' ಸಿನಿಮಾದಲ್ಲಿ ರಾಜ್​ ಬಿ.ಶೆಟ್ಟಿಗೆ ನಾಯಕಿಯಾಗಿ ಸಂಯುಕ್ತ ಹೊರನಾಡು ಮತ್ತು ಚೈತ್ರಾ ಆಚಾರ್​ ಇದ್ದಾರೆ. ಇವರ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ದೀಪಕ್​ ರಾಜ್​ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಇದೊಂದು ಬಿಗ್​ ಬಜೆಟ್​ ಚಿತ್ರ. ಲೈಟರ್ ಬುದ್ಧ ಫಿಲ್ಮ್ಸ್​, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರವನ್ನು ರವಿ ರೈ ಕಳಸ ನಿರ್ಮಾಣ ಮಾಡುತ್ತಿದ್ದಾರೆ. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಟಿ.ಕೆ.ದಯಾನಂದ್ ಟೋಬಿ ಚಿತ್ರಕ್ಕೆ ಕಥೆ ಬರೆದಿದ್ದು, ರಾಜ್ ಬಿ.ಶೆಟ್ಟಿ ರಚನೆ ಹಾಗೂ ಬಾಸಿಲ್ ಅವರ ನಿರ್ದೇಶನ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ ಮತ್ತು ಸಂಕಲನ ಹಾಗೂ ಅರ್ಜುನ್ ರಾಜ್ ಮತ್ತು ರಾಜಶೇಖರ್ ಅವರ ಸಾಹಸ ನಿರ್ದೇಶನವಿದೆ. ಟೋಬಿಯ 'ಮಾರಿ ಮಾರಿ, ಮಾರಿಗೆ ದಾರಿ' ಎಂಬ ಅಡಿ ಬರಹ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿದೆ.

ಇಷ್ಟೆಲ್ಲಾ ವಿಶೇಷತೆಗಳಿರುವ 'ಟೋಬಿ' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಇದೇ 22ರಿಂದ ಬುಕ್ ಮೈ ಶೋನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಲಿದೆ. ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆ 'ಟೋಬಿ'ಯನ್ನು ವಿತರಣೆ ಮಾಡುತ್ತಿದ್ದು, ಇದೇ 25ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:Raj B Shetty: 'ಟೋಬಿ' ಟ್ರೇಲರ್​ ರಿಲೀಸ್​: ರಾಜ್​ ಬಿ ಶೆಟ್ಟಿ ಹೊಸ ಸಿನಿಮಾ ಮೇಲೆ ಭಾರಿ ಕುತೂಹಲ

ABOUT THE AUTHOR

...view details