ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಸುದೀಪ್ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆಂದು ಸ್ಪಷ್ಟಪಡಿಸಿದ್ದಾರೆ. ಅವರ ಈ ಹೇಳಿಕೆ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಿಚ್ಚ ಸುದೀಪ್ ಹೇಳಿಕೆಯಿಂದ ನನಗೆ ಆಘಾತವಾಗಿದೆ ಮತ್ತು ನೋವಾಗಿದೆ" ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಅಸಮಾಧಾನ.. ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಹಲವು ವರ್ಷಗಳಿಂದ ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರ ನಡುವೆ ಉತ್ತಮ ಸಂಬಂಧವಿದೆ. ಸಿನಿಮಾ ಸಾಧನೆ ಕೂಡ ಅಪಾರ. ಆದ್ರೆ ರಾಜಕೀಯ ನಿಲುವುಗಳು ವಿಭಿನ್ನ. ಈವರೆಗೆ ಕಿಚ್ಚ ಸುದೀಪ್ ರಾಜಕೀಯದತ್ತ ಮುಖ ಮಾಡಿರಲಿಲ್ಲ. ಆದ್ರೆ ನಿನ್ನೆ ಬಿಜೆಪಿ ಸೇರಲ್ಲ, ಬಸವರಾಜ ಬೊಮ್ಮಾಯಿ ಪರ ನಿಲ್ಲುತ್ತೇನೆಂದು ಸ್ಪಷ್ಟಪಡಿಸಿದ್ದರು. ಇದು ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ನಟ ಪ್ರಕಾಶ್ ರಾಜ್ ಕೂಡ ನಿಮ್ಮ ಹೇಳಿಕೆ ನೋವುಂಟುಮಾಡಿದೆ ಎಂದು ತಿಳಿಸಿದ್ದಾರೆ.
ಸುದೀಪ್ ಮತ್ತು ಸಿಎಂ ಬೊಮ್ಮಾಯಿ ಅವರ ಮಾಧ್ಯಮಗೋಷ್ಟಿಗೂ ಮೊದಲು ಕೂಡ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಸದ್ಯ ಪ್ರಕಾಶ್ ರಾಜ್ ಹೇಳಿಕೆಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಪರ ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಯಾವ ಪಾರ್ಟಿಯನ್ನು ಅಥವಾ ಯಾರನ್ನು ಬೆಂಬಲಿಸಬೇಕೆಂಬುದು ಅವರವರಿಗೆ ಬಿಟ್ಟ ವಿಷಯ ಎಂದು ಹಲವರು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್ ಹೀಗಿತ್ತು: ಕಳೆದ ಕೆಲ ದಿನಗಳಿಂದ ನಟ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆಂಬ ಸುದ್ದಿ ಬಹಳ ಸದ್ದು ಮಾಡಿತ್ತು. ಇತ್ತೀಚೆಗೆ ಬಿಜೆಪಿ ಸೇರ್ಪಡೆ ಆಗಲಿದ್ದಾರೆಂದು ಹೇಳಲಾಗಿತ್ತು. ಬುಧವಾರ ಸಿಎಂ ಬೊಮ್ಮಾಯಿ ಈ ಬಗ್ಗೆ ಮಾಧ್ಯಮಗೋಷ್ಟಿ ಸಹ ಕರೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಹತಾಶ ಮನೋಭಾವದಿಂದ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ. ಇದು ಖಂಡಿತ ಸುಳ್ಳು ಸುದ್ದಿ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಕೂಡ ಹಲವರ ಟೀಕೆಗೆ ಗುರಿಯಾಯಿತು.