ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಒಳ್ಳೆ ಕಥೆ ಜೊತೆಗೆ ಮೇಕಿಂಗ್ ನಿಂದ ಸಾಕಷ್ಟು ಚಿತ್ರಗಳು ಸಿನಿಮಾ ಪ್ರಿಯರನ್ನು ಇಂಪ್ರೇಸ್ ಮಾಡುತ್ತಿವೆ. ಇದೀಗ 'ಪರಂವಃ' ಎಂಬ ಟೈಟಲ್ ಅನ್ನ ಸಿನಿಮಾವೊಂದು ಬರುತ್ತಿದೆ. ಪರಂವಃ ಅಂದ್ರೆ ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ. ಈ ಶೀರ್ಷಿಕೆಯಡಿ ಸದ್ಯ ಯುವಕರ ತಂಡವೊಂದು ಸದಬಿರುಚಿ ಸಿನಿಮಾ ಮಾಡಿದ್ದು, ಆ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಕೃಷ್ಣ, ವಿಭಿನ್ನ ಹಾಗೂ ರಾ ಆಗಿ ಟೀಸರ್ ಬಂದಿದ್ದು, ಹೊಸಬರ ಹೊಸ ಪ್ರಯತ್ನ ಕಾಣುತ್ತಿದೆ. ಒಳ್ಳೆ ಕಥೆ ಇದ್ರೆ ಯಾರಾದರೂ ಸಿನಿಮಾ ಮಾಡಬಹುದು ಎಂಬುದನ್ನು ಈ ತಂಡ ತೋರಿಸಿ ಕೊಟ್ಟಿದ್ದು, ಒಳ್ಳೆಯದಾಗಲಿ’ ಎಂದರು.
ಈ ಚಿತ್ರದ ನಿರ್ದೇಶಕ ಸಂತೋಷ ಕೈದಾಳ ಮಾತನಾಡಿ, ಸಹ, ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಈಗ ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಾಟಕ ಸಿನಿಮಾ ನೋಡತ್ತಾ ಬೆಳೆದ ನಾನು ‘ಆರ್ಯನ್’ ಸಿನಿಮಾ ಮೂಲಕ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡಿದೆ. ನಾನು ಹಾಗೂ ಗೆಳೆಯ ಪ್ರೇಮ್ ಸಿನಿಮಾ ಮಾಡುವ ಎಂದು ಯೋಜನೆ ಮಾಡಿಕೊಂಡಾಗ ಒಳ್ಳೆಯ ಕಥೆ ಮಾಡಿಕೊಂಡು ಗೆಳೆಯರ ಸಹಕಾರದಿಂದ ಈ ಸಿನಿಮಾ ಮಾಡಿದ್ವಿ. ಈ ಚಿತ್ರಕ್ಕೆ ಸುಮಾರು 200 ಜನ ಹಣ ಹಾಕಿದ್ದಾರೆ. ತುಮಕೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದರಲ್ಲಿ ವೀರಗಾಸೆಯನ್ನೇ ವೃತ್ತಿಯಾಗಿ ಬಳಸಿಕೊಂಡ ಕುಟುಂಬದ ಕಥೆಯ ಜತೆಗೆ ಇಂದಿನ ಯುವ ಜನಾಂಗದ ಜೀವನ ಶೈಲಿಯ ಬಗ್ಗೆ ತೋರಿಸಲಾಗಿದೆ. ಕ್ರೌಡ್ ಪಂಡಿಂಗ್ ಮೂಲಕ ಮಾಡಿದ ಚಿತ್ರ ಇದಾಗಿದ್ದು, ಸದ್ಯ ನಮ್ಮ ಪ್ರಯತ್ನಕ್ಕೆ ನಿರ್ಮಾಪಕ, ನಿರ್ದೇಶಕ ಗುರುದೇಶಪಾಂಡೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಹೇಳಿದರು.
ಸಹಾಯಕ ನಟನಾಗಿ ದುಡಿದು ಈಗ ನಟ:ನಂತರ ಮಾತನಾಡಿದ ಚಿತ್ರದ ನಾಯಕ ಪ್ರೇಮ್ ‘ನಾನು ಕೂಡ, ಸಹಾಯಕ ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಈಗ ನಟನಾಗಿದ್ದೇನೆ. ಸದ್ಯ ನಮ್ಮ ಈ ‘ಪರಂವಃ’ ಸಿನಿಮಾ ಸೆನ್ಸಾರ್ ಹಂತದಲ್ಲಿ ಇದೆ. ಇದರಲ್ಲಿ ನಾನು ಹೀರೋ ಅಲ್ಲ ಕಂಟೆಂಟ್ ಹೀರೋ. ಚಿತ್ರದಲ್ಲಿ ನಂಗೆ 4-5 ಗೆಟಪ್ ಇದಿದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ಚಿತ್ರದಲ್ಲಿ ಮೈಸೂರು ದಸರಾದಿಂದ ಕಥೆ ಶುರುವಾಗುತ್ತದೆ. ವೀರಗಾಸೆ ಕುಟುಂಬದಿಂದ ಬಂದಂತ ಹುಡುಗ ಏನೆಲ್ಲಾ ಆಗುತ್ತಾನೆ ಎಂಬುದು ಸಿನಿಮಾದ ಒಂದು ಲೈನ್ ಕಥೆ’ ಎನ್ನುವರು.