ಕರ್ನಾಟಕ

karnataka

ಬಹುನಿರೀಕ್ಷಿತ 'ಕಾಟೇರ' ಚಿತ್ರದ 'ಯಾವ ಜನುಮದ ಗೆಳತಿ' ಹಾಡು ಬಿಡುಗಡೆ

By ETV Bharat Karnataka Team

Published : Dec 11, 2023, 7:55 PM IST

Yava Janumada Gelathi song out: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ 'ಕಾಟೇರ' ಸಿನಿಮಾದ 'ಯಾವ ಜನುಮದ ಗೆಳತಿ' ಹಾಡು ಬಿಡುಗಡೆಯಾಗಿದೆ.

Kaatera movie second single yava janumada gelathi song out
ಬಹುನಿರೀಕ್ಷಿತ 'ಕಾಟೇರ' ಚಿತ್ರದ 'ಯಾವ ಜನುಮದ ಗೆಳತಿ' ಹಾಡು ಬಿಡುಗಡೆ

ಕನ್ನಡ ಚಿತ್ರರಂಗದ ಹೆಸರಾಂತ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕಾಟೇರ'. ಇದೇ ಡಿಸೆಂಬರ್​ 29ರಂದು ಚಿತ್ರ ತೆರೆ ಕಾಣಲಿದೆ. ಈ ಸಲುವಾಗಿ ಚಿತ್ರತಂಡ ಪ್ರೊಮೋಷನ್​ ಕೆಲಸದಲ್ಲಿ ಬ್ಯುಸಿಯಾಗಿದೆ. ಅದರ ಭಾಗವಾಗಿ ಇಂದು ಸಿನಿಮಾದ ಎರಡನೇ ಹಾಡು ಬಿಡುಗಡೆಗೊಂಡಿದೆ. 'ಯಾವ ಜನುಮದ ಗೆಳತಿ' ಎಂಬ ಸಾಹಿತ್ಯದಿಂದ ಪ್ರಾರಂಭಗೊಳ್ಳುವ ಈ ಹಾಡು ಅನಾವರಣಗೊಂಡು ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡಿದೆ.

ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಹೇಮಂತ್​ ಕುಮಾರ್​ ಮತ್ತು ರಕ್ಷಿತಾ ಸುರೇಶ್​ ಮಧುರ ಕಂಠದಲ್ಲಿ 'ಯಾವ ಜನುಮದ ಗೆಳತಿ' ಹಾಡು ಮೂಡಿಬಂದಿದೆ. ಆನಂದ್​ ಆಡಿಯೋ ಯೂಟ್ಯೂಬ್​ನಲ್ಲಿ ಸಾಂಗ್​ ಬಿಡುಗಡೆಯಾಗಿದೆ. ರಿಲೀಸ್​ ಆದ 6 ಗಂಟೆಯಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೂ 'ಕಾಟೇರ' ಹೆಸರು ಟ್ರೆಂಡಿಂಗ್​ನಲ್ಲಿದೆ. ​

'ಕ್ರಾಂತಿ' ಸಿನಿಮಾದ ಬಳಿಕ ದರ್ಶನ್​ ಅಭಿನಯಿಸುತ್ತಿರುವ ಮುಂದಿನ ಸಿನಿಮಾವೇ 'ಕಾಟೇರ'. ಪೋಸ್ಟರ್​ ಬಿಡುಗಡೆಯಾದಾಗಿನಿಂದ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಅಲ್ಲದೇ ಈ ಸಿನಿಮಾದಲ್ಲಿ ದರ್ಶನ್​ ಅವರು ಸಖತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ 'ಕಾಟೇರ' ಚಿತ್ರದ ಅನೌನ್ಸ್​ಮೆಂಟ್​ ವಿಡಿಯೋದಲ್ಲೂ ನಟ ದರ್ಶನ್​ ಲುಕ್​ನ ಸಣ್ಣ ಝಲಕ್​​ ಅನ್ನು ಚಿತ್ರತಂಡ ರಿವೀಲ್​ ಮಾಡಿತ್ತು. ಇದು ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಅದರ ನಂತರ ಬಿಡುಗಡೆಯಾದ ಸಿನಿಮಾದ ಮೊದಲ ಹಾಡು ಕೂಡ ಟ್ರೆಂಡಿಂಗ್​ ಆಗಿದೆ.

'ಕಾಟೇರ' 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿದೆ ಎಂದು ಈ ಹಿಂದೆ ಚಿತ್ರತಂಡ ಮಾಹಿತಿ ನೀಡಿತ್ತು. ಚಿತ್ರದಲ್ಲಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಜೊತೆಗೆ ಹಿರಿಯ ನಟರಾದ ಬಿರಾದಾರ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್, ಸೈಫಿ ಜಗಪತಿ ಬಾಬು ಮತ್ತು ಕುಮಾರ್ ಗೋವಿಂದ್, ಶೃತಿ, ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

'ರಾಬರ್ಟ್' ಚಿತ್ರದ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತೆ ದರ್ಶನ್ ಅವರಿಗೆ ಆ್ಯಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾವಿದು. ಮಾಸ್ತಿ ಸಂಭಾಷಣೆ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ತಮ್ಮ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರೋ 'ಕಾಟೇರ' ಸಿನಿಮಾ ಇದೇ ಡಿಸೆಂಬರ್ 29ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಡಿಬಾಸ್ ಅಭಿನಯದ 'ಕಾಟೇರ' ನಾಯಕಿ 'ಪದ್ಮಾವತಿ': ಫಸ್ಟ್​ ಲುಕ್​ ನೋಡಿ

ABOUT THE AUTHOR

...view details