ಕರ್ನಾಟಕ

karnataka

ETV Bharat / entertainment

ಮನಸ್ತಾಪಕ್ಕೆ ಫುಲ್​​ ಸ್ಟಾಪ್.. 20 ವರ್ಷಗಳ ಬ್ರೇಕ್​ ಬಳಿಕ ದರ್ಶನ್​ - ಪ್ರೇಮ್ ಕಾಂಬೋದಲ್ಲಿ ಸಿನಿಮಾ

ದರ್ಶನ್​ - ಪ್ರೇಮ್ ಕಾಂಬೋದಲ್ಲಿ ಸಿನಿಮಾ ಮೂಡಿ ಬರಲಿದ್ದು, ಕೆವಿಎನ್ ಪ್ರೊಡಕ್ಷನ್ಸ್‌ ಚಿತ್ರಕ್ಕೆ ಬಂಡವಾಳ ಹೂಡಲಿದೆ.

By ETV Bharat Karnataka Team

Published : Aug 26, 2023, 7:17 PM IST

darshan prem ready to work together in a movie
ದರ್ಶನ್​ - ಪ್ರೇಮ್ ಕಾಂಬೋದಲ್ಲಿ ಸಿನಿಮಾ

'ಕರಿಯ' 2003ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ನಟ ದರ್ಶನ್ ಹಾಗು ನಿರ್ದೇಶಕ ಜೋಗಿ ಪ್ರೇಮ್‌ ಸಿನಿಮಾ ಕೆರಿಯರ್​ಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ. ಚಾಲೆಂಜಿಂಗ್​ ಸ್ಟಾರ್ ದರ್ಶನ್ ಸಿನಿ ಪಯಣದಲ್ಲಿ ಮಾಸ್ಟರ್ ಪೀಸ್ ಆಗಿ ಉಳಿದಿರುವ ಚಿತ್ರ. ಕರಿಯ ಬಳಿಕ ದರ್ಶನ್ ಹಾಗೂ ಪ್ರೇಮ್ ಸಿನಿಮಾ ಮಾಡಿಲ್ಲ. ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಇನ್ನೇನು ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಅಭಿನಯಿಸಬೇಕಿತ್ತು ಎನ್ನುವಷ್ಟರಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಮಾತುಗಳು ಕೇಳಿಬಂದವು.

ಈ ನಿರ್ದೇಶಕ ನಟನ ಕಾಂಬೋದಲ್ಲಿ ಇನ್ನೆಂದು ಸಿನಿಮಾ ಬರೋದಿಲ್ಲವೆನೋ ಎಂಬ ಭಾವನೆ ಮೂಡಿತ್ತು. ಆದ್ರೀಗ ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಖ್ಯಾತಿಯ ಕೆವಿಎನ್ ಪ್ರೊಡಕ್ಷನ್ಸ್‌ ದರ್ಶನ್ ಹಾಗೂ ಜೋಗಿ ಪ್ರೇಮ್ ಅವರನ್ನು ಮತ್ತೆ ಒಂದು ಮಾಡುವ ಮೂಲಕ ಇಡೀ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದಾರೆ‌.

ಇತ್ತೀಚೆಗೆ ಕೆವಿಎನ್ ಪ್ರೊಡಕ್ಷನ್ಸ್‌ ಸಂಸ್ಥೆಯ ನಿರ್ಮಾಪಕ ವೆಂಕಟ್ ಕೋಣಂಕಿ, ನಿರ್ದೇಶಕ ಪ್ರೇಮ್ ಹಾಗು ನಟ ದರ್ಶನ್ ಅವರನ್ನು ಮುಖಾಮುಖಿ ಮಾಡಿಸುವ ಮೂಲಕ ಇವರಿಬ್ಬರಲ್ಲಿದ್ದ ಮನಸ್ತಾಪಕ್ಕೆ ಫುಲ್ ಸ್ಟಾಪ್ ಇಡಿಸಿದ್ದಾರೆ. ಸಿನಿಮಾ ಮಾಡೋದಿಕ್ಕೆ ಇಬ್ಬರೂ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ‌. ಈ ಬಗ್ಗೆ ಕೆವಿನ್ ಸಿನಿಮಾ ನಿರ್ಮಾಣ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ತಿಳಿಸಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಪ್ರೇಮ್ ಪತ್ನಿ ರಕ್ಷಿತಾ ಕೂಡ ಉಪಸ್ಥಿತರಿದ್ದರು‌.

ದರ್ಶನ್ ಅವರು ಕೆವಿಎನ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಕೆಲಸ ಮಾಡುವುದು ಇದೇ ಮೊದಲು. ಆದರೆ, ದರ್ಶನ್ ಮತ್ತು ಪ್ರೇಮ್ ಇಪ್ಪತ್ತು ವರ್ಷಗಳ ಹಿಂದೆ 2003ರಲ್ಲಿ ತೆರೆಕಂಡ ಕರಿಯ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಸೂಪರ್​ ಹಿಟ್ ಆಗಿತ್ತು. ಅದಾದ ಎರಡು ದಶಕಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಇದನ್ನೂ ಓದಿ:'ವಿದ್ಯಾರ್ಥಿ ವಿದ್ಯಾರ್ಥಿನಿಯರೇ'.. ಕಾಲೇಜು ಕೇಂದ್ರಿತ ಕಥೆಯಲ್ಲಿ ಚಂದನ್ ಶೆಟ್ಟಿ ನಟನೆ - ಶೀರ್ಷಿಕೆ ಅನಾವರಣಗೊಳಿಸಿದ ವಿದ್ಯಾರ್ಥಿಗಳು

ಆದರೆ ದರ್ಶನ್ ಅವರ ಮುಂದಿನ ಸಿನಿಮಾ ಐತಿಹಾಸಿಕ, ಪೌರಾಣಿಕ ಅಥವಾ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಬಹುದೇ ಎಂಬುದರ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಕಥಾವಸ್ತುವಿನ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:'ನನ್ನ ಬೆಳವಣಿಗೆಯಲ್ಲಿ ಮಾಧ್ಯಮದವರ ಪಾಲು ಸಾಕಷ್ಟಿದೆ': ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಪ್ರೇಮ್ ಮತ್ತು ದರ್ಶನ್ ತಮ್ಮ ಮುಂದಿರುವ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ, ಹೆಸರಡಿದ ಈ ಸಿನಿಮಾ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಸದ್ಯ ದರ್ಶನ್ ಅವರು ರಾಕ್‌ಲೈನ್ ಪ್ರೊಡಕ್ಷನ್‌ ನಿರ್ಮಾಣದ 'ಕಾಟೇರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ನಂತರ, ಪ್ರಕಾಶ್ ಜಯರಾಮ್ ನಿರ್ದೇಶನದ ಸಿನಿಮಾದಲ್ಲಿಯೂ ಕೆಲಸ ಮಾಡಲು ಮುಂದಾಗಿದ್ದಾರೆ. ಇತ್ತ ಪ್ರೇಮ್ ಕೆಡಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ನಟ ದರ್ಶನ್ ಹಾಗೂ ನಿರ್ದೇಶಕ ಪ್ರೇಮ್ ನಡುವೆ ಉದ್ಭವಿಸಿದ ವೈಮನಸ್ಸಿಗೆ ಬ್ರೇಕ್ ಹಾಕುವ ಮೂಲಕ ಮತ್ತೆ ಸಿನಿಮಾವೊಂದಕ್ಕೆ ಕೈ ಜೋಡಿಸಿರೋದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ABOUT THE AUTHOR

...view details