ಕರ್ನಾಟಕ

karnataka

2023ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು..

By ETV Bharat Karnataka Team

Published : Dec 14, 2023, 10:47 PM IST

2023ರಲ್ಲಿ ಕನ್ನಡ ಚಿತ್ರರಂಗ ಕಳೆದುಕೊಂಡ ಹೆಸರಾಂತ ನಟರು, ನಟಿಯರು ಮತ್ತು ನಿರ್ದೇಶಕರಿವರು..

Actors of Kannada cinema who passed away in 2023
2023ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು..

2023 ಕನ್ನಡ ಚಿತ್ರರಂಗಕ್ಕೆ ಅಷ್ಟೇನು ಲಕ್ಕಿ ವರ್ಷ ಅಲ್ಲ ಎನ್ನಬಹುದು. ಯಾಕೆಂದರೆ ಈ ವಸಂತದಲ್ಲಿ ಸಂತೋಷಕ್ಕಿಂತ ನೋವಿನ ಸಂಗತಿಗಳೇ ಹೆಚ್ಚು ಉಂಟಾಗಿವೆ. ಸ್ಯಾಂಡಲ್​ವುಡ್​ ಈ ವರ್ಷ ಖ್ಯಾತ ಕಲಾವಿದರನ್ನು ಕಳೆದುಕೊಂಡಿದೆ. ಹೆಸರಾಂತ ನಟರು, ನಟಿಯರು, ನಿರ್ಮಾಪಕರು ಇಹಲೋಕ ತ್ಯಜಿಸಿದ್ದಾರೆ. ಮೊನ್ನೆಯಷ್ಟೇ, ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರು ನಿಧನರಾಗಿದ್ದಾರೆ. ಈ ವರ್ಷದ ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಇಂತಹ ಸಾವಿನ ಸುದ್ದಿಗಳು ನೋವುಂಟು ಮಾಡಿದೆ.

ಡಾ.ಲೀಲಾವತಿ

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಕನ್ನಡದ 'ಕುಲವಧು' ಡಾ.ಲೀಲಾವತಿ ಇದೇ ಡಿಸೆಂಬರ್​ 8ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ದೊಡ್ಡ ಸ್ಟಾರ್ ನಟಿಯಾಗಿದ್ದರೂ ಕೂಡ ಸರಳ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು.

ಹಿರಿಯ ನಟ ಲಕ್ಷ್ಮಣ್

ಇನ್ನು ಹೊಸ ವರ್ಷದ ಆರಂಭದಲ್ಲೇ ನಿಧನ ಹೊಂದಿದ್ದ ನಟ ಅಂದ್ರೆ ಲಕ್ಷ್ಮಣ್. ಜನವರಿ 22ರಂದು ಹೃದಯಾಘಾತದಿಂದ ಹಿರಿಯ ನಟ ಲಕ್ಷ್ಮಣ್ ಕೊನೆಯುಸಿರೆಳೆದಿದ್ದರು. ಡಾ ರಾಜ್ ಕುಮಾರ್, ಶಂಕರ್ ನಾಗ್, ಪ್ರಭಾಕರ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಕನ್ನಡದ ಬಹುತೇಕ ನಟರ ಸಿನಿಮಾಗಳಲ್ಲಿ ಲಕ್ಷ್ಮಣ್ ಖಳ ನಟ ಹಾಗೂ ಪೋಷಕ ಪಾತ್ರಗಳನ್ನು ಮಾಡಿದ್ದರು. ಹೀಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು.

ನಿತಿನ್ ಗೋಪಿ

'ಹಲೋ ಡ್ಯಾಡಿ' ಸಿನಿಮಾ ಖ್ಯಾತಿಯ ನಿತಿನ್ ಗೋಪಿ ಕೂಡ ಜೂನ್ 2ರಂದು ಇಹಲೋಕ ತ್ಯಜಿಸಿದರು. 39ನೇ ವಯಸ್ಸಿನವರಾಗಿದ್ದ ನಿತಿನ್ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪ್ರಖ್ಯಾತ ಕೊಳಲು ವಾದಕ ಗೋಪಿ ಅವರ ಪುತ್ರ. ಡಾ.ವಿಷ್ಣುವರ್ಧನ್ ಜೊತೆ ಹಲೋ ಡ್ಯಾಡಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. 39ನೇ ವಯಸ್ಸಿಗೆ ವಿಧಿವಶರಾದ ನಟ ನಿತಿನ್ ಗೋಪಿ ಸಾವಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು.

ನಿರ್ದೇಶಕ ಸಿ.ವಿ ಶಿವಶಂಕರ್

'ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ..' ಹಾಡು ಬರೆದಿದ್ದ ಹಿರಿಯ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್ ಜೂನ್ 27ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು.​ ಸಿ.ವಿ ಶಿವಶಂಕರ್ ಸ್ಕೂಲ್ ಮಾಸ್ಟರ್​, ಕೃಷ್ಣ ಗಾರುಡಿ, ರತ್ನಮಂಜರಿ, ರತ್ನಗಿರಿ ರಹಸ್ಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ, ಕನ್ನಡ ಕುವರ, ವೀರ ಮಹಾದೇವ ಸೇರಿದಂತೆ ಹಲವು ಚಿತ್ರಗಳನ್ನು ಶಿವಶಂಕರ್​ ನಿರ್ದೇಶನ ಮಾಡಿದ್ದರು.

ನಟ ಶರತ್ ಬಾಬು

ಕನ್ನಡದ ಸೂಪರ್ ಹಿಟ್ ಚಿತ್ರ 'ಅಮೃತವರ್ಷಿಣಿ' ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು ಮೇ ತಿಂಗಳ 22ರಂದು ಅನಾರೋಗ್ಯದಿಂದ ಹೈದರಾಬಾದ್​ನಲ್ಲಿ ನಿಧನರಾದರು. ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿರುವ ಶರತ್ ಬಾಬು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ನಾಯಕನಾಗಿ, ಪೋಷಕ ನಟನಾಗಿ ಸಿನಿ ಪ್ರೇಮಿಗಳನ್ನ ರಂಜಿಸಿದ್ದಾರೆ.

ಕೆ.ಸಿ.ಎನ್ ಮೋಹನ್

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಹಾಗೂ ನವರಂಗ್ ಚಿತ್ರಮಂದಿರದ ಮಾಲೀಕ ಕೆ.ಸಿ.ಎನ್ ಮೋಹನ್ ಜುಲೈ 2ರಂದು ನಿಧನರಾದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೆ.ಸಿ.ಎನ್ ಮೋಹನ್​ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಡಾ. ರಾಜ್​ಕುಮಾರ್, ಡಾ.ವಿಷ್ಣುವರ್ಧನ್ ಅಭಿಯನದ ಜಯಸಿಂಹ, ರಮ್ಯಾ ನಟನೆಯ ಜೂಲಿ, ರಾಮರಾಜ್ಯದಲ್ಲಿ ರಾಕ್ಷಸರು, ಧರ್ಮ ಯುದ್ಧ, ಶಂಕರ್​ ನಾಗ್​ ನಟನೆಯ ಭಲೇ ಚತುರರು ಮುಂತಾದ ಸಿನಿಮಾಗಳನ್ನು ಮೋಹನ್​ ಅವರು ನಿರ್ಮಾಣ ಮಾಡಿದ್ದರು.

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ

ಆಗಸ್ಟ್ 7ರಂದು ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಾಗಿ ವಿದೇಶದಲ್ಲಿ ನಿಧನರಾದರು. ಇದು ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. 28 ವರ್ಷದ ಸ್ಪಂದನಾ ಆಕಾಲಿಕ ಮರಣದಿಂದ ಚಿತ್ರರಂಗ ಅಲ್ಲದೇ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು.

ಸಂಪತ್ ಜಯರಾಮ್

ಈ ಮಧ್ಯೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜಯರಾಮ್ ನೆಲಮಂಗಲದ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಸಂಪತ್ ಜಯರಾಮ್ ಗೆ 35 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ; ಅಂಬೇಡ್ಕರ್​ ಮೈದಾನದಲ್ಲಿ ಅಂತಿಮ ದರ್ಶನ

ABOUT THE AUTHOR

...view details