ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರಿಂಗ್, ವಿನ್ಯಾಸ ಮತ್ತು ಅನಾಲಿಟಿಕ್ಸ್ನ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಬಿಎಂ ಸಮೂಹದ 'ಕ್ಲೈಯಂಟ್ ಇನ್ನೋವೇಶನ್ ಸೆಂಟರ್'ಗೆ (ಸಿಐಸಿ) ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ್ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದರು.
ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ಕೇಂದ್ರವು ಮೈಸೂರಿನಿಂದ ತನ್ನ ಚಟುವಟಿಕೆಗಳನ್ನು ನಡೆಸಲಿದೆ. ಇನ್ನು ಎರಡು ತಿಂಗಳಲ್ಲಿ ಐಬಿಎಂ ಸಮೂಹವು ಮೈಸೂರಿನಲ್ಲೂ ತನ್ನ ಕಚೇರಿಯನ್ನು ಆರಂಭಿಸಲಿದೆ. ಈ ಕೇಂದ್ರವು ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕ್ಷಿಪ್ರ ಮತ್ತು ಹೈಟೆಕ್ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನಿನ (ಕೆಡಿಇಎಂ) ಸ್ಪೋಕ್-ಶೋರ್ ನೀತಿಯಡಿಯಲ್ಲಿ 2025ರ ಹೊತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2026ರ ಹೊತ್ತಿಗೆ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ಕ್ಲಸ್ಟರ್ ಗಳಲ್ಲಿ 5 ಸಾವಿರ ಐಟಿ ಕಂಪನಿಗಳು ಮತ್ತು ನವೋದ್ಯಮಗಳು ನೆಲೆಯೂರುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಮೈಸೂರಿನಲ್ಲಿ ಐಬಿಎಂ ತನ್ನ ಸಿಐಸಿ ಕೇಂದ್ರವನ್ನು ತೆರೆದಿರುವುದರಿಂದ ರಾಜ್ಯವು ಜಾಗತಿಕ ಮಟ್ಟದ ಡಿಜಿಟಲ್ ಸೇವೆಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯಲಿದೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.