ಮಂಗಳೂರು(ದಕ್ಷಿಣ ಕನ್ನಡ) :ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಬಗ್ಗೆ ಕೇರಳದವರ ಕೈವಾಡದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಆತ ಸಜ್ಜನ ಕಾರ್ಯಕರ್ತ. ತನ್ನ ವಿಚಾರದಲ್ಲಿ, ಜೀವನದಲ್ಲಿ ರಾಷ್ಟ್ರಮಾತೆಯ ಆರಾಧನೆಯೆ ಪ್ರಮುಖ ಎಂದು ತಿಳಿದುಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಒಡನಾಡಿ, ಸಹೋದರನನ್ನು ಕಳೆದುಕೊಂಡಿದ್ದೇವೆ. ಅವರ ಮನೆಯವರಿಗೆ ಎಷ್ಟು ದುಃಖವಿದೆಯೋ ಅಷ್ಟೇ ದುಃಖ ನಮಗಿದೆ ಎಂದರು.
ಈ ಘಟನೆ ನಡೆದ ಹಿನ್ನೆಲೆ ಕಂಡಾಗ ದೇಶದಲ್ಲಿ ಮತೀಯ ಶಕ್ತಿಗಳು ಇಂತಹ ಕೃತ್ಯ ಮಾಡಿ ಭಯದ ವಾತವರಣ ನಿರ್ಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ, ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ, ಹುಬ್ಬಳ್ಳಿ ಘಟನೆ ಹೀಗೆ ಮತಾಂಧ ಶಕ್ತಿಗಳು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದೆ. ಯಾವ್ಯಾವ ಶಕ್ತಿಯಿದೆ ಇದೆಲ್ಲವನ್ನೂ ತನಿಖೆ ಮಾಡಬೇಕು. ಪ್ರವೀಣ್ ನೆಟ್ಟಾರ್ ಹತ್ಯೆ ಗಂಭೀರವಾಗಿ ತೆಗೆದುಕೊಂಡು ಉತ್ತರ ಕೊಡುವ ಪ್ರಯತ್ನ ಆಗುತ್ತದೆ ಎಂದರು.