ಹುಬ್ಬಳ್ಳಿ :ಕಾರ್ಯನಿರತ ಚುನಾವಣಾಧಿಕಾರಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಉಣಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಲೂಕಿನ ನೂಲ್ವಿ ಗ್ರಾಮ ಪಂಚಾಯತ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ ಹೆಚ್ ರಾಠೋಡ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಚುನಾವಣೆ ಕರ್ತವ್ಯಕ್ಕೆ ತೆರಳುವ ವೇಳೆ ಉಣಕಲ್ ಬಸ್ ನಿಲ್ದಾಣದಲ್ಲಿ ಮೂರ್ಛೆ ಹೋಗಿ ಕುಸಿದು ಬಿದ್ದಿದ್ದರು. ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಅವರು ಅಸುನೀಗಿದ್ದಾರೆ.
ಓದಿ-ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಈ ಕುರಿತು ನೂಲ್ವಿ ಗ್ರಾಪಂ ಚುನಾವಣೆ ಅಧಿಕಾರಿ ಉಪನ್ಯಾಸಕ ಅಶೋಕ ಎಸ್ ಗಡಾದ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಆನಂದ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ ಹೆಚ್ ರಾಠೋಡ್ ಅವರನ್ನು ನೂಲ್ವಿ ಗ್ರಾಪಂ ಸಹಾಯಕ ಚುನಾವಣೆ ಅಧಿಕಾರಿಯಾಗಿ ನೇಮಿಸಲಾಗಿತ್ತು.
ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ ಹಾಗೂ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರು ಕಿಮ್ಸ್ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಸದ್ಯ ಚುನಾವಣಾ ತುರ್ತು ಕಾರ್ಯದ ನಿಮಿತ್ತ ದೈಹಿಕ ಶಿಕ್ಷಕ ರಾಜೇಸಾಬ್ ನದಾಫ್ ಎಂಬುವರನ್ನು ನೂಲ್ವಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ.