ಧಾರವಾಡ:ಯಾವುದೇ ಪ್ಯಾಕೇಜ್ನಲ್ಲೂ ತಮಗೆ ಪರಿಹಾರ ನೀಡದ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮಂಗಳಮುಖಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದು ಇವರಿಗೆ ಕಿಟ್ ಕೊಡಲು ಬಂದಾಗ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಕಷ್ಟದಲ್ಲಿದ್ದು, ನೆರವು ನೀಡುವಂತೆ ಮಂಗಳಮುಖಿಯರು ಕೇಳಿಕೊಂಡಿದ್ದರು. ಹೀಗಾಗಿ ಕುಬೇರಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಮಂಗಳಮುಖಿಯರಿಗೆ ದಿನಸಿ ಕಿಟ್ ನೀಡಿದೆ.
ದಿನಸಿ ಕಿಟ್ ಪಡೆದುಕೊಂಡ ಬಳಿಕ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಮಂಗಳಮುಖಿಯರು, ಒಂದು ಪರ್ಸೆಂಟ್ ಇರುವ ನಮ್ಮನ್ನು ಪ್ಯಾಕೇಜ್ನಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದವರು ಈ ಜಗತ್ತನ್ನು, ರಾಜ್ಯವನ್ನು ಹೇಗೆ ಆಳುತ್ತಾರೆ ಎಂದು ಪ್ರಶ್ನಿಸಿದರು.
ಓದಿ: ಒಂದೇ ಒಂದು ಮೆಸೇಜ್ಗೆ ಮಂಗಳಮುಖಿ ಮನೆ ಬಾಗಿಲಿಗೆ ಆಹಾರ ಸಾಮಗ್ರಿ ತಲುಪಿಸಿದ ಕಿಚ್ಚ
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಾವು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ನಿಜವಾಗಲೂ ನಾವು ತುಂಬಾ ತುಳಿತಕ್ಕೆ ಒಳಪಟ್ಟಿದ್ದೇವೆ ಎಂದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮಂಗಳಮುಖಿಯರು ಅಸಮಾಧಾನ ವ್ಯಕ್ತಪಡಿಸಿದರು. ಭಿಕ್ಷಾಟನೆ ಮಾಡಿ ನಾವು ಜೀವನ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಜನರು ಕೂಡ ಹೊರಬರಲಾರದ ಸ್ಥಿತಿ ಇದ್ದು, ನಾವು ಸಂಕಷ್ಟದಲ್ಲಿದ್ದೇವೆ ಎಂದರು.
ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕಿದೆ. ಈ ಸಂಬಂಧ ಸುಪ್ರಿಂ ಕೋರ್ಟ್ನಿಂದ ಆದೇಶ ಕೂಡ ಆಗಿದೆ. ಆದರೂ ಶೇ 1 ರಷ್ಟೇ ಇರುವ ನಮ್ಮನ್ನು ಕಡೆಗಣಿಸಲಾಗಿದೆ. ಸರ್ಕಾರದ ಪ್ಯಾಕೇಜ್ನಲ್ಲಿ ನಮ್ಮ ಹೆಸರು ಕೂಡ ತೆಗೆದುಕೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.