ದಾವಣಗೆರೆ :ಸಚಿವ ಕೆ ಎಸ್ ಈಶ್ವರಪ್ಪ ಆರೋಪಿ ಅಲ್ಲದಿದ್ರೂ ಅವರು ಆರೋಪಿ ಸ್ಥಾನದಲ್ಲಿದ್ದಾರೆ. ಅವರನ್ನು ಬಂಧಿಸಿ ಎಂದು ಹೇಳುವವರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿ ಅವರು, ಈಶ್ವರಪ್ಪ ಅವರು ಹಿರಿಯ ಮುಖಂಡರು. ಅವರು ಯಾವುದೇ ಅಪರಾಧ ಮಾಡಿಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದಾರೆ ಎಂದರು.
ನಮ್ಮ ಸರ್ಕಾರ ಮುಕ್ತವಾಗಿ ತನಿಖೆ ನಡೆಸಲಿದೆ. ಈಶ್ವರಪ್ಪ ಆರೋಪದಿಂದ ಮುಕ್ತರಾಗುತ್ತಾರೆ. ಕಾಂಗ್ರೆಸ್ನವರು ಗುತ್ತಿಗೆದಾರರ ಸಂಘದಿಂದ ಪ್ರಧಾನ ಮಂತ್ರಿ, ಪಕ್ಷದ ವರಿಷ್ಠರಿಗೆ ಪತ್ರ ಬರೆಸುತ್ತಿದ್ದೀರಿ. ಈ ಪತ್ರದ ಡ್ರಾಪ್ಟ್ ರೆಡಿಯಾಗಿದ್ದು ಕಾಂಗ್ರೆಸ್ ಮುಖಂಡರ ಮನೆಯಲ್ಲಿ. ಕಾಂಗ್ರೆಸ್ನವರಿಗೆ ಯಾವುದೇ ವಿಷಯ ಸಿಗದೆ ಈಗ ಈಶ್ವರಪ್ಪ ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.