ಬೆಂಗಳೂರು:ಸತತ ಕಾರ್ಯದೊತ್ತಡದ ನಡುವೆ ಬಳಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ವಯೋಸಹಜವಾಗಿ ಎದುರಾಗುವ ಆರೋಗ್ಯ ಸಮಸ್ಯೆಯ ನಿವಾರಣೆ ಹಾಗೂ ಮಾನಸಿಕ ನೆಮ್ಮದಿಯ ಉದ್ದೇಶದಿಂದ ಕಳೆದ ವಾರವಷ್ಟೇ 74ನೇ ವರ್ಷಕ್ಕೆ ಕಾಲಿರಿಸಿರುವ ಸಿದ್ದರಾಮಯ್ಯ ಸತತ 10 ದಿನಗಳ ಕಾಲ ವಿಶ್ರಾಂತಿಗೆ ತೆರಳಲಿದ್ದಾರೆ.
ತಮ್ಮ ಆರೋಗ್ಯವೃದ್ಧಿಗಾಗಿ ಜಿಂದಾಲ್ ಸಂಸ್ಥೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಇಂದು ತೆರಳಿ ದಾಖಲಾಗಲಿದ್ದಾರೆ. ಈ ಹಿಂದೆಯೂ ಒಂದೆರಡು ಬಾರಿ ಪ್ರಕೃತಿ ಚಿಕಿತ್ಸೆಯನ್ನು ಪಡೆದಿದ್ದ ಸಿದ್ದರಾಮಯ್ಯ ಈ ವಿಧಾನದಿಂದ ತಮಗೆ ಉಲ್ಲಾಸ -ಜೀವನೋತ್ಸಾಹ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದರು.
ಸಿದ್ದರಾಮಯ್ಯ ಮಾತ್ರವಲ್ಲ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿರುವ ಅನೇಕ ರಾಜಕೀಯ ನಾಯಕರು ಜಿಂದಾಲ್ಗೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ವರ್ಷಕ್ಕೊಮ್ಮೆ ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆದು ತೆರಳುತ್ತಾರೆ.
ನಾಲ್ಕನೇ ಬಾರಿಗೆ ಅಂತಿಮ
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆಲ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅಲ್ಲಿಗೆ ಹೋಗಿರಲಿಲ್ಲ. ಕಳೆದ ತಿಂಗಳು ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪಕ್ಷದ ವಿವಿಧ ಬೆಳವಣಿಗೆಗಳು, ದೆಹಲಿ ಪ್ರವಾಸ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆ ರಾಜ್ಯ ಪ್ರವಾಸ ಕೈಗೊಂಡ ಹಿನ್ನೆಲೆ ಕೊಂಚ ತಡವಾಗಿ ತೆರಳುತ್ತಿದ್ದಾರೆ.
ಜೊತೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹುಟ್ಟುಹಬ್ಬದ ಸಮಾರಂಭ, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯರ ಅಧಿಕೃತ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲೇಬೇಕಿದ್ದ ಕಾರಣ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯನ್ನು ಮುಂದೂಡಿದ್ದರು.
ಇದನ್ನೂ ಓದಿ: ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆ ವಾಪಸ್ ಪಡೆದು, ರೈತರ ಕ್ಷಮೆ ಕೇಳಲಿ: ಸಿದ್ದರಾಮಯ್ಯ ಟ್ವೀಟ್
ಅಲ್ಲದೇ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಹಾಗೂ ಲಾಕ್ಡೌನ್ ಕಾರಣದಿಂದಲೂ ಚಿಕಿತ್ಸೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಮೂರು ಬಾರಿ ರೂಮ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು. ಆದರೆ ಈಗ ಸಮಯ ಕೂಡಿ ಬಂದಿದ್ದು, ಬೆಂಗಳೂರಿಗೆ ಸಮೀಪದಲ್ಲೇ ಇರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲು ತೀರ್ಮಾನಿಸಿದ್ದಾರೆ. ಮುಂದಿನ ಹತ್ತು ದಿನ ಇವರು ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು, ನಿಸರ್ಗದ ಮಡಿಲಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಸಾಲು ಸಾಲು ಚುನಾವಣೆ
ಇನ್ನೂ ತಡ ಮಾಡಿದ್ರೆ ಆಗಲ್ಲ, ಮುಂದೆ ಸಾಲು ಸಾಲು ಚುನಾವಣೆಗಳು ಇವೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಬರಲಿವೆ. ಯಾವುದೇ ಸಮಯದಲ್ಲೂ ಬಿಬಿಎಂಪಿ ಚುನಾವಣೆ ಘೋಷಣೆ ಆಗಬಹುದು. ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸೆಪ್ಟೆಂಬರ್ 13 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಆರೋಗ್ಯ ಸುಧಾರಿಸಿಕೊಳ್ಳಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಒಂದು ಬಾರಿ ಕೋವಿಡ್ಗೆ ತುತ್ತಾಗಿರುವ ಅವರು, ಎರಡನೇ ಅಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಜನರಿಂದ ದೂರವಿದ್ದರು. ಚೇತರಿಕೆ ನಂತರವೂ ಹಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಗಾಗ್ಗೆ ಜ್ವರದಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾಯಿಲೆ ಹೊಂದಿರುವ ಅವರು ಹಿಂದೆಲ್ಲಾ ಶುಗರ್ ಲೆವೆಲ್ ಅನ್ನು ಸರಿಯಾಗಿ ನಿಯಂತ್ರಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಅದನ್ನ ನಿಯಂತ್ರಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಇತ್ತೀಚಿನ ಕೆಲ ತಿಂಗಳಲ್ಲಿ ಶರೀರದ ತೂಕವು ಹೆಚ್ಚಾಗುತ್ತಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.