ಕರ್ನಾಟಕ

karnataka

ಇಂದು ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರ ಆಶಯಗಳ ಮೇಲೆ ದಾಳಿ ನಡೆಯುತ್ತಿದೆ: ಸುರ್ಜೇವಾಲಾ

By

Published : Nov 14, 2021, 4:09 PM IST

ಕಾಂಗ್ರೆಸ್ ಹೋರಾಟಕ್ಕೆ ದೊಡ್ಡ ಇತಿಹಾಸ ಇದೆ. ಇಂಥ ಒಂದು ಪಕ್ಷದ ಸದಸ್ಯರಾಗುವ ಅವಕಾಶ ನಮಗೆ ಸಿಕ್ಕಿದೆ. ಇನ್ನಷ್ಟು ಜನರನ್ನು ನಾವು ಐತಿಹಾಸಿಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ ಎಂದರು. ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನದಂದು ನಾವು ಈ ಮಹತ್ವದ ಸದಸ್ಯತ್ವ ಅಭಿಯಾನ ಆರಂಭಿಸುತ್ತಿದ್ದೇವೆ..

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್  ಸುರ್ಜೇವಾಲಾ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ

ಬೆಂಗಳೂರು :ಇಂದು ದೇಶದ ಮೇಲೆ ಕೆಲ ವ್ಯಕ್ತಿಗಳಿಂದ ದಾಳಿ ನಡೆಯುತ್ತಿದೆ. ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರ ಆಶಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಂಡಿತ್ ಜವಾಹರಲಾಲ್ ನೆಹರು 135ನೇ ಜನ್ಮದಿನ (Jawaharalal Neharu Jayanti) ಹಾಗೂ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಪಕ್ಷ ಇಂತಹ ದಾಳಿಯ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ.

ಅದಕ್ಕಾಗಿ ಇಂಥದ್ದೊಂದು ಸದಸ್ಯತ್ವ ಅಭಿಯಾನದ ಅನಿವಾರ್ಯತೆ ಇದೆ. ಪಕ್ಷದ ತಳಮಟ್ಟದ ಕಾರ್ಯಕರ್ತರು ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕಾರ್ಯವನ್ನು ಮಾಡಬೇಕು. ಈ ಮೂಲಕ ದೇಶವಿರೋಧಿ ಶಕ್ತಿಗಳಿಂದ ಆಗುತ್ತಿರುವ ಹಾನಿಯನ್ನು ತಡೆಯಲು ಯುವ ಸಮೂಹವನ್ನು ಕಟ್ಟಬೇಕು ಎಂದರು.

ಯುವ ಸಮುದಾಯದ ಮೇಲೆ ದಾಳಿ ನಡೆಯುತ್ತಿದೆ :ಯುವ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಸಹ ಇದಾಗಿದೆ. ದೇಶದ ಬಡವರು, ದಲಿತರು, ಶೋಷಿತರು ಅವಕಾಶವಂಚಿತರು ಅಧಿಕಾರದಿಂದ ದೂರವಾಗಿದ್ದಾರೆ. ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಹಕ್ಕುಗಳನ್ನು ಸಹ ಕಿತ್ತುಕೊಳ್ಳಲಾಗುತ್ತಿದೆ. ಇದೆಲ್ಲದರ ವಿರುದ್ಧ ದೇಶ ಒಂದಾಗಬೇಕಾದರೆ ಕಾಂಗ್ರೆಸ್ ಇನ್ನಷ್ಟು ಬಲಗೊಳ್ಳಬೇಕು. ಇದರಿಂದಾಗಿ ತಳಮಟ್ಟದ ಕಾಂಗ್ರೆಸ್ ನಾಯಕರು ಪಕ್ಷ ಕಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಗಮನ ವಹಿಸಬೇಕು ಎಂದು ಕರೆ ಕೊಟ್ಟರು.

ವಂಚಕರಿಂದ ದೇಶವನ್ನು ರಕ್ಷಿಸುವ ಮೂಲಕ ಮಾಡಬೇಕು :ಕೈಗಾರಿಕೋದ್ಯಮಿಗಳು ದೇಶದ ಬಡವರನ್ನ ತಮ್ಮ ಹಿಡಿತಕ್ಕೆ ಪಡೆಯುವ ಕಾರ್ಯ ಮಾಡಲಿದ್ದಾರೆ. ಈ ಕಾರಣಕ್ಕಾಗಿಯೂ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಯಶಸ್ವಿಯಾಗಬೇಕು. ಪಂಡಿತ್ ಜವಾಹರಲಾಲ್ ನೆಹರು ಅವರ ಕನಸು ಸ್ವಾತಂತ್ರ್ಯ ಆಗಿತ್ತು. ಕಾಂಗ್ರೆಸ್​ನ ಎಲ್ಲಾ ಕಾರ್ಯಕರ್ತರು ಈ ಕನಸನ್ನು, ವಂಚಕರಿಂದ ದೇಶವನ್ನು ರಕ್ಷಿಸುವ ಮೂಲಕ ಮಾಡಬೇಕು ಎಂದು ಹೇಳಿದರು.

50 ಲಕ್ಷ ಮಂದಿ ಸದಸ್ಯತ್ವದ ಗುರಿ :ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivkumar), ಕಾಂಗ್ರೆಸ್ ಹೋರಾಟಕ್ಕೆ ದೊಡ್ಡ ಇತಿಹಾಸ ಇದೆ. ಇಂಥ ಒಂದು ಪಕ್ಷದ ಸದಸ್ಯರಾಗುವ ಅವಕಾಶ ನಮಗೆ ಸಿಕ್ಕಿದೆ. ಇನ್ನಷ್ಟು ಜನರನ್ನು ನಾವು ಐತಿಹಾಸಿಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ ಎಂದರು. ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನದಂದು ನಾವು ಈ ಮಹತ್ವದ ಸದಸ್ಯತ್ವ ಅಭಿಯಾನ ಆರಂಭಿಸುತ್ತಿದ್ದೇವೆ.

ಪ್ರತಿಯೊಬ್ಬರಿಗೂ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ನಾಯಕರು ಎಷ್ಟೇ ದೊಡ್ಡವರಾದರೂ ಸಹ ತಮ್ಮ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿಗೆ ಮುಂದಾಗಬೇಕು. 25 ಸದಸ್ಯರ ನೋಂದಣಿ ಮಾಡುವವರಿಗೆ ಮತದಾನದ ಹಕ್ಕು ಸಿಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ದೇಶವನ್ನು ಉಳಿಸುವ ಉದ್ದೇಶದಿಂದ ನಾವು ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. 50 ಲಕ್ಷ ಮಂದಿಯನ್ನು ಸದಸ್ಯರನ್ನಾಗಿಸುವ ಗುರಿಯನ್ನು ಹೊಂದಬೇಕು ಎಂದು ಹೇಳಿದರು.

2023 ನಾವು ಒಂದು ಗಡಿಯಾಗಿ ಸ್ವೀಕರಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಲಕ್ಷ ಮಂದಿ ಸದಸ್ಯರಾಗಿಸಬೇಕು. ಮನೆ ಮನೆಗೆ ಭೇಟಿ ನೀಡಿ ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು. ಕಾಂಗ್ರೆಸ್​ ಇತಿಹಾಸ ಹಾಗೂ ಜನರಿಗೆ ನಾವು ನೀಡಿದ ಕಾರ್ಯಕ್ರಮಗಳ ವಿವರ ನೀಡಬೇಕು ಎಂದು ಕರೆಕೊಟ್ಟರು.

ABOUT THE AUTHOR

...view details