ಬೆಂಗಳೂರು: ಮಡಿಕೇರಿಯ ಐತಿಹಾಸಿಕ ಕೋಟೆ ಸಂರಕ್ಷಣೆಗೆ ಕೈಗೊಳ್ಳಲಿರುವ ಪ್ರಮುಖ ಕಾಮಗಾರಿಗಳ ಟೆಂಡರ್ ಪ್ರಗತಿ ಕುರಿತಂತೆ ಜೂನ್ 16ರೊಳಗೆ ಪ್ರಮಾಣಪತ್ರ ಸಲ್ಲಿಸಿ ಎಂದು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ)ಗೆ ಹೈಕೋರ್ಟ್ಗೆ ನಿರ್ದೇಶಿಸಿದೆ.
ಕೋಟೆ ಸಂರಕ್ಷಣೆಗೆ ಸಂಬಂಧಿಸಿದಂತೆ ನಿವೃತ್ತ ಅಧಿಕಾರಿ ಜೆ.ಎಸ್ ವಿರೂಪಾಕ್ಷಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರನಾಥ್ ಕಾಮತ್ ವಾದಿಸಿ, ನ್ಯಾಯಾಲಯದ ನಿರ್ದೇಶನದಂತೆ ಇನ್ನೂ ಭಾರತೀಯ ಪುರಾತತ್ವ ಇಲಾಖೆ ಕೋಟೆ ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ, ಟೆಂಡರ್ ಕೂಡ ಕರೆದಿಲ್ಲ. ಜೊತೆಗೆ ಮುಂಗಾರು ಆಗಮಿಸುತ್ತಿದ್ದು, ಮಳೆ ಜಾಸ್ತಿಯಾದರೆ ಕೋಟೆಯಲ್ಲಿ ನೀರು ಸೋರಿಕೆಯಾಗಿ ದುಸ್ಥಿತಿ ತಲುಪಲಿದೆ ಎಂದರು.
ಎಎಸ್ಐ ಪರ ವಕೀಲರು ವಾದಿಸಿ, ಕೋಟೆ ಸಂರಕ್ಷಣೆಯ ಟೆಂಡರ್ ಕರೆಯಲು ಎಲ್ಲ ಸಿದ್ಧತೆ ನಡೆದಿದೆ. ಆದಷ್ಟು ಬೇಗ ಪ್ರಕ್ರಿಯೆಗಳು ಆರಂಭವಾಗಲಿವೆ. ಸ್ವಲ್ಪ ಸಮಯ ನೀಡಿದರೆ ಆ ಬಗ್ಗೆ ವಿವರಗಳನ್ನು ಸಲ್ಲಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಳೆದ ಮಾರ್ಚ್ 26ರ ಆದೇಶದಂತೆ ಕೋಟೆ ಸಂರಕ್ಷಣಾ ಕಾಮಗಾರಿ ಟೆಂಡರ್ ಪ್ರಗತಿಯ ಬಗ್ಗೆ ಜೂನ್ 16ರ ಒಳಗೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಅಲ್ಲದೆ, ಮಳೆಗಾಲ ಎದುರಾಗುತ್ತಿರುವುದರಿಂದ ಕೋಟೆಯಲ್ಲಿ ಮಳೆ ನೀರು ಸೋರಿಕೆ ಸಾಧ್ಯತೆ ಇದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ.
ಹಾಗಾಗಿ, ಎಎಸ್ಐ ಅಧಿಕಾರಿಗಳು ಅಗ್ಗಾಗ್ಗೆ ಕೋಟೆಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಬೇಕು. ಹಾಳಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಇದೇ ವೇಳೆ ಕೋಟೆ ಒತ್ತುವರಿ ತೆರವಿನ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿತು.ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್, ಸಂಬಂಧಪಟ್ಟ ತಹಸೀಲ್ದಾರ್ ಗೆ ಕೋವಿಡ್ ಸೋಂಕು ತಗುಲಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸ್ವಲ್ಪ ಕಾಲಾವಕಾಶ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.