ಕರ್ನಾಟಕ

karnataka

By

Published : Aug 17, 2022, 4:00 PM IST

ETV Bharat / city

ಗೃಹ ಸಚಿವ ಜ್ಞಾನೇಂದ್ರ ಮೇಲೆಯೇ ಐದಾರು ಕೇಸ್​ಗಳಿದ್ದವು: ಕಿಮ್ಮನೆ ವಾಗ್ದಾಳಿ

ಮಂಗಳೂರಿನಲ್ಲಿ ಮೂರು ಪ್ರಕರಣ ನಡೆದಾಗ ಆರಗ ಜ್ಞಾನೇಂದ್ರ ಹೆದರಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಕೂತಿದ್ದರು. ಇವರನ್ನು ಗುಡ್ಡೆಕೊಪ್ಪಲು ಗ್ರಾಮ ಪಂಚಾಯಿತಿಗೆ ಸೀಮಿತವಾಗಿ ಹೋಂ ಮಿನಿಸ್ಟರ್ ಮಾಡೋದು ಒಳ್ಳೆದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಲೇವಡಿ ಮಾಡಿದರು.

kimmane-rathnakar-slams-home-minister-araga-jnanendra
ಗೃಹ ಸಚಿವ ಜ್ಞಾನೇಂದ್ರ ಮೇಲೆಯೇ ಐದಾರು ಕೇಸ್​ಗಳಿದ್ದವು: ಕಿಮ್ಮನೆ ವಾಗ್ದಾಳಿ

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತವರು ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಕೋಮು ಗಲಭೆ ಸೇರಿದಂತೆ ಹಲವು ವಿಚಾರದಲ್ಲಿ ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಪ್ರಸನ್ನ ಕುಮಾರ್ ಟೀಕಾ ಪ್ರಹಾರ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕಿಮ್ಮನೆ ರತ್ನಾಕರ ಮಾತನಾಡಿ, ಗೃಹ ಸಚಿವರದ್ದು ಗೂಂಡಾ ಪ್ರವೃತ್ತಿ. ಇವರು ಗಲಾಟೆ ಆಗಬೇಕು ಅಂತಲೇ ಮಾತನಾಡುತ್ತಾರೆ. ಕೆ.ಎಚ್​.ಈಶ್ವರಪ್ಪ, ಜ್ಞಾನೇಂದ್ರ ಇವರೆಲ್ಲ ಗೆಲ್ಲಬೇಕು ಅಂದ್ರೆ ಇಂತಹ ಗಲಾಟೆಗಳು ನಡೆಯುತ್ತಿರಬೇಕು. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಕೋಮು ಗಲಭೆಗಳ ಹಿಂದೆ ಜ್ಞಾನೇಂದ್ರ ಇದ್ದಾರೆ. ನಂದಿತಾ ಪ್ರಕರಣದಲ್ಲಿ ಇವರು ಏನು ಮಾಡಿದ್ರು?. ಜ್ಞಾನೇಂದ್ರ ಮೇಲೆ ಐದಾರು ಕೇಸ್​ಗಳಿದ್ದವು. ಇಂಥವರಿಂದ ಏನು ಆಡಳಿತ ನಿರೀಕ್ಷೆ ಮಾಡಬಹುದು?. ಇವರು ಜನರಿಗೆ ನ್ಯಾಯ ಕೊಡುವುದಕ್ಕೆ ಸರ್ಕಾರ ಮಾಡುತ್ತಿಲ್ಲ. ಆರ್​ಎಸ್​ಎಸ್​ಗೆ ನ್ಯಾಯ ಕೊಡುವುದಕ್ಕೆ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಜ್ಞಾನೇಂದ್ರ ಹೆದರಿಕೊಂಡು ತೀರ್ಥಹಳ್ಳಿಯಲ್ಲಿ ಕೂತಿದ್ದರು:ಮಂಗಳೂರಿನಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಾಗ ಜ್ಞಾನೇಂದ್ರ ಹೆದರಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಕೂತಿದ್ದರು. ಪಟಾಕಿ ಹೊಡೆದರೆ ಮಕ್ಕಳು ಅಮ್ಮನ ಸೆರಗಲ್ಲಿ ಅಡಗಿಕೊಳ್ಳುವಂತೆ ಹೆದರಿಕೊಂಡು ಬಂದು ಕೆಡಿಪಿ ಸಭೆ ಮಾಡುತ್ತಿದ್ದರು. ಇವರನ್ನು ಗುಡ್ಡೆಕೊಪ್ಪಲು ಗ್ರಾಮ ಪಂಚಾಯಿತಿಗೆ ಸೀಮಿತವಾಗಿ ಹೋಂ ಮಿನಿಸ್ಟರ್ ಮಾಡೋದು ಒಳ್ಳೆದು ಎಂದು ಕಿಮ್ಮನೆ ಲೇವಡಿ ಮಾಡಿದರು.

ಗಾಂಧಿ ಹತ್ಯೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಸಾವರ್ಕರ್ ಏಳನೇ ಆರೋಪಿ. ಅವರೊಬ್ಬ ಹಿಂದೂವಾದಿ ಅಷ್ಟೇ, ಸ್ವಾತಂತ್ರ್ಯ ಹೋರಾಟಗಾರರಲ್ಲ. 1915ಕ್ಕಿಂತ ಮೊದಲು ಹಿಂದೂ ಮಹಾಸಭಾ, ಮುಸ್ಲೀಂ ಲೀಗ್ ಎರಡೂ ಪ್ರಬಲವಾಗಿತ್ತು. ಗಾಂಧಿ ಅಖಾಡಕ್ಕೆ ಇಳಿದಾಗ ಇವರೆಲ್ಲ ವೀಕ್ ಆಗಿದ್ದರು. ಈಗ ಅದೇ ಬಿಜೆಪಿಯವರು​ ಗಾಂಧಿ ಅವರಿಗೆ ಬೈಯುತ್ತಾರೆ ಎಂದು ಟೀಕಿಸಿದರು.

ಪ್ರಸನ್ನ ಕುಮಾರ್ ಮಾತನಾಡಿ, ಶಿವಮೊಗ್ಗ ನಗರ ಅತಿ ಸೂಕ್ಷ್ಮ ಪ್ರದೇಶ ಆಗುವುದಕ್ಕೆ ಈಶ್ವರಪ್ಪ ಕಾರಣ. ಈಶ್ವರಪ್ಪ ಪ್ರತಿ ಅವಧಿಯಲ್ಲೂ ಮಾಡಿದ್ದು, ಇದೇ ಕೋಮು ಸಂಘರ್ಷಗಳು. ಇವರಿಗೆ ಮುಸ್ಲಿಮರ ಬಿರಿಯಾನಿ ಆಗುತ್ತೆ, ಮುಸ್ಲಿಮರು ಬ್ಯುಸಿನೆಸ್ ಪಾರ್ಟನರ್ ಆಗಬಹುದು. ಬೇಕಾದಷ್ಟು ಕಡೆ ಮುಸ್ಲಿಮರು ಜೊತೆಗೆ ಈಶ್ವರಪ್ಪ ಪಾರ್ಟನರ್ ಆಗಿದ್ದಾರೆ. ಶಿವಮೊಗ್ಗ ಗಣಿ ಸ್ಪೋಟ ಪ್ರಕರಣಕ್ಕೆ ಕಾರಣೀಕರ್ತರು ಯಾರು ಎಂದು ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕಾಂಗ್ರೆಸ್‌ಗೆ ಹೋಗಲ್ಲ, ಕೊನೆಯ ಉಸಿರಿನವರೆಗೂ ಬಿಜೆಪಿಯಲ್ಲೇ ಇರುವೆ: ಶ್ರೀರಾಮುಲು

ABOUT THE AUTHOR

...view details