ಬೆಂಗಳೂರು:ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಸಂಧಾನಕಾರನಾಗಿ ಶ್ರಮಿಸುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ಮುಂದುವರೆಸಿದ್ದಾರೆ. ಈ ನಿಟ್ಟಿನಲ್ಲಿ ಅತೃಪ್ತರ ಶಾಸಕರ ಮನವೊಲಿಕೆ ಕೆಲಸವನ್ನು ಅವರು ನಿರಂತರವಾಗಿ ನಡೆಸುತ್ತಿದ್ದಾರೆ.
ನಮ್ಮ ಶಾಸಕರು ಮರಳಿ ಬರುವ ವಿಶ್ವಾಸವಿದೆ: ಡಿ.ಕೆ.ಶಿವಕುಮಾರ್
ರಾಜೀನಾಮೆ ನೀಡಿರುವ ಶಾಸಕರು ಕಾನೂನು ಮೀರುವುದಿಲ್ಲ, ಕ್ಷೇತ್ರದ ಜನರ ಅಭಿಪ್ರಾಯವನ್ನು ಕಡೆಗಣಿಸುವುದಿಲ್ಲ ಎಂಬ ನಂಬಿಕೆ ಇದೆ. ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರ ಪಾಸ್ ಆಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆ. ನಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ, ಸರಿ ಮಾಡಿಕೊಳ್ಳುತ್ತೇವೆ. ನಮ್ಮೆಲ್ಲಾ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರೆಲ್ಲಾ ಹುಲಿಗಳಂತೆ ಹೋರಾಡಿದ್ದಾರೆ ಎಂದರು.
ಸರ್ಕಾರ ಉಳಿಸಲು ನಾನೊಬ್ಬನೇ ಶ್ರಮಿಸುತ್ತಿದ್ದೇನೆ ಎಂಬುದರ ಬಗ್ಗೆ ಮಾತನಾಡಲ್ಲ, ನಮ್ಮೆಲ್ಲಾ ನಾಯಕರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಶಾಸಕರಾದ ಸೌಮ್ಯಾರೆಡ್ಡಿ, ಎಂಟಿಬಿ ನಾಗರಾಜು ಸೇರಿದಂತೆ ಎಲ್ಲರನ್ನೂ ಮಾತನಾಡಿಸಿದ್ದೇವೆ. ಬಿಜೆಪಿ ನಾಯಕರು ದೆಹಲಿಯಿಂದ ಬರಲಿ, ಅವರ ಕೆಲಸ ಅವರು ಮಾಡಲಿ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.