ಬೆಂಗಳೂರು: ಬಸವಕಲ್ಯಾಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಕ್ಕಾಗಿ ಕಾಂಗ್ರೆಸ್ ಸೋತಿದೆ ಎಂದು ಹೇಳಿದ್ದೀರಿ. ನಿಮಗೆ ಅಲ್ಪಸಂಖ್ಯಾತರ ಮೇಲೆ ಕೋಪವೋ? ಜೆಡಿಎಸ್ ಮೇಲೆ ಅಸಮಾಧಾನವೋ? ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ನೀವು ಯಾವ ಅಲ್ಪಸಂಖ್ಯಾತ ನಾಯಕರನ್ನೂ ಬೆಳೆಸಿದ ನಿದರ್ಶನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಸವಕಲ್ಯಾಣದಲ್ಲಿ ಜೆಡಿಎಸ್ ಪಡೆದ ಮತಗಳು ನಮ್ಮ ಮತಗಳು ಎಂದಿದ್ದೀರಿ. ಇದು ಪ್ರಜ್ಞಾವಂತ ಮತದಾರನಿಗೆ ನೀವು ಮಾಡಿದ ಅವಮಾನ ಅಲ್ಲದೆ ಮತ್ತೇನು? ಅಲ್ಪಸಂಖ್ಯಾತರು ನಿಮ್ಮ ಜೀತದಾಳುಗಳೇ? ಜನಾದೇಶವನ್ನು ಒಪ್ಪಿಕೊಳ್ಳುವ ನಿಸ್ಪೃಹ ಮನಸ್ಸು ನಿಮಗೂ ಇರಬೇಕಲ್ಲವೇ? ಅಲ್ಪಸಂಖ್ಯಾತರು ಮತ್ತು ಜೆಡಿಎಸ್ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.