ಕರ್ನಾಟಕ

karnataka

By

Published : Apr 6, 2021, 6:11 PM IST

ETV Bharat / city

ಅಬಕಾರಿ ಕಾಯ್ದೆ ಉಲ್ಲಂಘನೆಯಿಂದ‌ ದಾಖಲಾದ ಪ್ರಕರಣಗಳೆಷ್ಟು?

ಅಬಕಾರಿ ಕಾಯ್ದೆ ಉಲ್ಲಂಘನೆ ಮಾಡಿದ ಸಂಬಂಧ 1,41,325 ಕಡೆ ತಪಾಸಣೆ ಮಾಡಲಾಗಿದ್ದು, 19,406 ಪ್ರಕರಣಗಳು ದಾಖಲಾಗಿವೆ. ದಾಳಿ ವೇಳೆ 12,239 ಮಂದಿಯನ್ನು ಬಂಧಿಸಿದ್ದು, 928 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Excise Minister K. Gopalayya
ಅಬಕಾರಿ ಸಚಿವ ಕೆ. ಗೋಪಾಲಯ್ಯ

ಬೆಂಗಳೂರು:ರಾಜ್ಯದಲ್ಲಿ 2020-21 ಸಾಲಿನ ಡಿಸೆಂಬರ್​​ವರೆಗೆ ಒಟ್ಟು 37,950 ದಾಳಿ ನಡೆಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಮಾಡಿದ ಸಂಬಂಧ 1,41,325 ಕಡೆ ತಪಾಸಣೆ ಮಾಡಲಾಗಿದ್ದು, 19,406 ಪ್ರಕರಣಗಳು ದಾಖಲಾಗಿವೆ.

ಅಬಕಾರಿ ಕಾಯ್ದೆ ಉಲ್ಲಂಘನೆ ಬಗ್ಗೆ ಸಚಿವ ಗೋಪಾಲಯ್ಯ ಮಾಹಿತಿ

ದಾಳಿ ವೇಳೆ 12,239 ಮಂದಿಯನ್ನು ಬಂಧಿಸಿದ್ದು, 928 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 86,143 ಲೀಟರ್ ಮದ್ಯ, 32,679 ಲೀಟರ್​​ ಬಿಯರ್, 5,711 ಲೀಟರ್​​ ವೈನ್, 26,650 ಲೀಟರ್​​ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 3,423 ಲೀಟರ್​ ಕಳ್ಳಭಟ್ಟಿ ಹಾಗೂ 14,473 ಲೀಟರ್​ ಬೆಲ್ಲದ ಕೊನೆ ನಾಶಪಡಿಸಲಾಗಿದೆ.

ಎನ್​​ಡಿಪಿಎಸ್ ಕಾಯ್ದೆಯಡಿ ಜುಲೈ 2020ರಿಂದ ಡಿಸೆಂಬರ್ ಅಂತ್ಯದವರೆಗೆ 175 ಪ್ರಕರಣ ದಾಖಲಿಸಿ, ಒಟ್ಟು 426 ಆರೋಪಿಗಳನ್ನು ಬಂಧಿಸಲಾಗಿದೆ. 1,320,385 ಕೆಜಿ ಗಾಂಜಾ, 4,86,803 ಕೆಜಿ ಹಸಿ ಗಾಂಜಾ, 2,539 ಗಾಂಜಾ ಗಿಡಗಳು, 12 ಕೆಜಿ 500 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆ ಎಷ್ಟು?: ಅಬಕಾರಿ ಇಲಾಖೆಯಲ್ಲಿ 1,709 ಭರ್ತಿಯಾಗದ ವಿವಿಧ ವೃಂದಗಳ ಹುದ್ದೆಗಳಿವೆ. ರಾಜ್ಯ ಬೊಕ್ಕಸಕ್ಕೆ ಆದಾಯ ನೀಡುವ ಇಲಾಖೆಗಳ ಪೈಕಿ ಮುಂಚೂಣಿಯಲ್ಲಿರುವ ಅಬಕಾರಿ ಇಲಾಖೆಯಲ್ಲಿಯೇ ಇಷ್ಟು ಹುದ್ದೆಗಳು ಖಾಲಿ ಇರುವುದು ಬೊಕ್ಕಸಕ್ಕೆ ಆದಾಯ ನೀಡುವ ಪ್ರಮಾಣವನ್ನು ಕಡಿಮೆ ಮಾಡಬಹುದಾದರೂ ಈ ಹುದ್ದೆಗಳನ್ನು ಇನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿಲ್ಲ. ಒಟ್ಟು 5,811 ವಿವಿಧ ವೃಂದದ ಹುದ್ದೆಗಳು ಅಬಕಾರಿ ಇಲಾಖೆಯಲ್ಲಿವೆ. ಈ ಹುದ್ದೆಗಳ ಪೈಕಿ 4,102 ಹುದ್ದೆಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಗ್ರೂಪ್ ಎ- 54, ಗ್ರೂಪ್‌ ಬಿ- 41, ಗ್ರೂಪ್ ಸಿ- 1,577, ಗ್ರೂಪ್ ಡಿ - 37 ಹುದ್ದೆಗಳು ಖಾಲಿ ಇವೆ.

ಅಕ್ರಮವಾಗಿ ಮದ್ಯ ಮಾರಾಟ, ಕಳ್ಳಭಟ್ಟಿ ತಡೆಯಲು ಅಬಕಾರಿ ಇನ್‌ಸ್ಪೆಕ್ಟರ್, ಅಬಕಾರಿ ಸಬ್‌ ಇನ್ಸ್‌ಪೆಕ್ಟರ್ ಮತ್ತು ಪೇದೆ ಕರ್ತವ್ಯಗಳು ಪ್ರಮುಖವಾಗಿರುತ್ತವೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಈಗಾಗಲೇ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಮತ್ತಷ್ಟು ಪರಿಣಾಮಕಾರಿ ಕರ್ತವ್ಯ ನಿರ್ವಹಣೆಗೆ ಭರ್ತಿಯಾಗದೇ ಉಳಿದಿರುವ ಸದರಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

2020-21 ಸಾಲಿನಲ್ಲಿ 19,433.76 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ. 22,700 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 822.66 ಕೋಟಿ ರೂ. ಹೆಚ್ಚಿನ ಅಬಕಾರಿ ತೆರಿಗೆ ಸಂಗ್ರಹವಾಗಿದೆ. ಸಿಎಲ್ 7 ಮಳಿಗೆಗಳಿಗೆ ಕಾನೂನು ಪ್ರಕಾರ ಅನುಮತಿ ನೀಡಲಾಗುತ್ತಿದೆ.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಿವಾಲ್ವರ್ :ಅಬಕಾರಿ ಅಧಿಕಾರಿಗಳಿಗೆ ರಿವಾಲ್ವರ್ ನೀಡಲು ನಿರ್ಧರಿಸಲಾಗಿದೆ ಎಂದು ಅಬಕಾರಿವ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ಇಲಾಖೆ ಇನ್ಸ್‌ಪೆಕ್ಟರ್​​​​ಗಳಿಗೆ 300 ಬೈಕ್ ನೀಡಲಾಗಿದೆ. 77 ಜೀಪ್ ಖರೀದಿಸಲು ನಿರ್ಧರಿಸಲಾಗಿದೆ. ಅಬಕಾರಿ ಜಿಲ್ಲಾಧಿಕಾರಿ ಕಚೇರಿಗಳಿಗೆ 4 ಬಂದೂಕು ನೀಡಲಾಗುವುದು. ಮಾದಕ ವಸ್ತು ತಡೆಯಲು ಅಬಕಾರಿ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆ ಸೇರಿ ನಿಯಂತ್ರಿಸಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಓದಿ:ಕೇಂದ್ರ ಸರ್ಕಾರದ ಹೊಸ ಆದೇಶ: 45 ವರ್ಷ ಮೇಲ್ಪಟ್ಟ ನೌಕರರು ಲಸಿಕೆ ಹಾಕಿಸಿಕೊಳ್ಳಲು ಸೂಚನೆ

ABOUT THE AUTHOR

...view details