ಕರ್ನಾಟಕ

karnataka

ಮಹಿಳಾ ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ

By

Published : Jul 2, 2021, 2:04 AM IST

ಎಲ್ಲೆಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದಾರೊ ಅದೇ ಕಾಲೇಜಿನಲ್ಲಿ ಲಸಿಕೆ ನೀಡುತ್ತೇವೆ. ಸುಮಾರು 20 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಇದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಲಸಿಕೆ ನೀಡುತ್ತೇವೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

Dcm ashwathnarayana programme in vikas soudha Bengaluru
ಮಹಿಳಾ ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ

ಬೆಂಗಳೂರು:ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವ ಗ್ರಾಮ ಮಟ್ಟದ ಸಂಜೀವಿನಿ ಘಟಕಗಳಡಿ ಕಾರ್ಯ ನಿರ್ವಹಿಸುವ 17,121 ಮಹಿಳಾ ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತಾ ಇಲಾಖೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು.

ವಿಕಾಸಸೌಧದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ, ಸಮುದಾಯ ಬಂಡವಾಳ ನಿಧಿ ಬಿಡುಗಡೆ ಜತೆಗೆ ಅತ್ಯುತ್ತಮವಾಗಿ ಕೆಲಸ ಮಾಡಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದ ಸ್ವಸಹಾಯ ಗುಂಪಿಗೆ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಡೇ-ಎನ್‌ಆರ್‌ಎಲ್‌ಎಂ (ರಾಷ್ಟ್ರೀಯ ಜೀವನೋಪಾಯ ಇಲಾಖೆ) ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಒಳಪಡುವ ಸ್ವಸಹಾಯ ಗುಂಪುಗಳಿಗೆ 14,221.75 ಲಕ್ಷ ರೂ. ಹಾಗೂ ಎನ್‌ಆರ್‌ಇಟಿಪಿ ಕಾರ್ಯಕ್ರಮದಡಿ ಕೆಲಸ ಮಾಡುವ 74 ಗ್ರಾಮ ಪಂಚಾಯಿತಿಗಳ ಒಕ್ಕೂಟಗಳಲ್ಲಿರುವ 862 ಸ್ವಸಹಾಯ ಗುಂಪುಗಳಿಗೆ 6.82 ಕೋಟಿ ರೂ. ಸೇರಿ ಒಟ್ಟು 17,121 ಸ್ವಸಹಾಯ ಗುಂಪುಗಳಿಗೆ 149 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ ಮಾಡಲಾಗಿದೆ ಎಂದರು.

2021-22ನೇ ಸಾಲಿನಲ್ಲಿ ಈ ಸ್ವಸಹಾಯ ಗುಂಪುಗಳಿಗೆ ಒಟ್ಟು 400 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಬಿಡುಗಡೆ ಮಾಡಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಬಂಡವಾಳದ ನೆರವಿನಿಂದ ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಮಹಿಳೆಯರು ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಸಾಕಣೆ, ಗುಡಿ ಕೈಗಾರಿಕೆ, ಟೈಲರಿಂಗ್‌, ಹೋಟೆಲ್‌ ಉದ್ಯಮ ಇತ್ಯಾದಿಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು.

ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಇದಕ್ಕೆ ಇನ್ನೂ ಹೆಚ್ಚಿನ ಆರ್ಥಿಕ ಶಕ್ತಿ ತುಂಬಲಾಗುವುದು ಎಂದು ಡಿಸಿಎಂ ತಿಳಿಸಿದರು.

1 ಲಕ್ಷ ರೂ. ರಾಷ್ಟ್ರೀಯ ಪುರಸ್ಕಾರ

ಲಾಭ ಗಳಿಕೆ, ಬಂಡವಾಳ ನಿಧಿ ಸದುಪಯೋಗದ ಮೂಲಕ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿ ಮಹಿಳಾ ದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಪಾತ್ರವಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಮಾಗಡಿ ಗ್ರಾಮ ಪಂಚಾಯಿತಿಯ ʼರೇಣುಕಾ ದೇವಿʼ ಸ್ವಸಹಾಯ ಗುಂಪಿಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನೊಳಗೊಂಡ ಪುರಸ್ಕಾರವನ್ನು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಪ್ರದಾನ ಮಾಡಿದರು. ಗುಂಪಿನ ಪರವಾಗಿ ರೇಖಾ ತಳವಾರ ಅವರು ನಗದು ಮತ್ತು ಪ್ರಶಸ್ತಿ ಸ್ವೀಕರಿಸಿದರು.

ಇದನ್ನೂ ಓದಿ:ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ ಅವರು, ಎಲ್ಲೆಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದಾರೊ ಅದೇ ಕಾಲೇಜಿನಲ್ಲಿ ಲಸಿಕೆ ನೀಡುತ್ತೇವೆ. ಸುಮಾರು 20 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಇದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಲಸಿಕೆ ನೀಡುತ್ತೇವೆ. ಪ್ರತಿದಿನ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕೆಲಸ ಮಾಡುತ್ತೇವೆ. ಈಗಾಗಲೇ ಮೂರು ದಿನಗಳಿಂದ ಲಸಿಕೆ ನೀಡುತ್ತಿದ್ದೇವೆ. ಜೊತೆಗೆ ಸಂಬಂಧಿಸಿದ ವಿಸಿಗಳಿಗೆ, ಪ್ರಾಧ್ಯಾಪಕರಿಗೆ ನೀಡುತ್ತಿದ್ದೇವೆ. ಸಣ್ಣ ಕಾಲೇಜಿನಲ್ಲಿ ಮಾಡಲು ಆಗಲ್ಲ. 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಲಸಿಕೆ ನೀಡುತ್ತೇವೆ ಎಂದರು.

ಅನ್​ಲಾಕ್ ಬಗ್ಗೆ ನಾಳೆ ಸಭೆ

ಸೋಮವಾರದಿಂದ ಅನ್​ಲಾಕ್ ಮಾಡಲು ಸಿಎಂ ಸಭೆಯನ್ನು ಶುಕ್ರವಾರ ಕರೆದಿದ್ದಾರೆ. ಯಾವುದನ್ನು ಅನ್​​ಲಾಕ್ ಮಾಡುತ್ತಾರೆ ಎಂದು ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ. ಮುಖ್ಯಮಂತ್ರಿಗಳು ಅದನ್ನು ತಿಳಿಸುತ್ತಾರೆ ಎಂದು ಹೇಳಿದರು.

ರಾಮನಗರ ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ರಾಮನಗರ ಉಸ್ತುವಾರಿ ನೀಡುವ ಬಗ್ಗೆ ಸಚಿವ ಸಿ.ಪಿ. ಯೋಗೇಶ್ವರ್ ಬೇಡಿಕೆ ಇಟ್ಟಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತಹ ಚರ್ಚೆಗಳೇನು‌ ನಡೆದಿಲ್ಲ. ಊಹೆಗಳಿಗೆಲ್ಲ ನಾನು ಉತ್ತರ ಕೊಡಲ್ಲ. ಅಂತಹ ಸಂದರ್ಭ ಬಂದಾಗ ಮಾತನಾಡೋಣ ಎಂದರು.

ABOUT THE AUTHOR

...view details