ಬೆಂಗಳೂರು: ರಾಜ್ಯದಲ್ಲಿ ಅನ್ಲಾಕ್ 3.0 ಜಾರಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ರೈಲು, ಬಸ್ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಕೆ.ಆರ್.ಮಾರ್ಕೆಟ್ ಜನರಿಂದ ತುಂಬಿ ತುಳುಕುತ್ತಿದ್ದು, ಕೋವಿಡ್ ನಿಯಮಗಳು ಅಸ್ತಿತ್ವದಲ್ಲಿದ್ದರೂ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ರಾಜ್ಯಸರ್ಕಾರ ಎರಡನೇ ಅಲೆಯ ಸಂಬಂಧ ಏಪ್ರಿಲ್ 27ರಿಂದ 14 ದಿನಗಳ ಮೊದಲ ಹಂತದ ಲಾಕ್ಡೌನ್ ಘೋಷಿಸಿತ್ತು. ಬಳಿಕ ಕೋವಿಡ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 7ರವರೆಗೆ ಲಾಕ್ಡೌನ್ ಮುಂದುವರೆಸಲಾಗಿತ್ತು. ನಂತರ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ ಅನ್ಲಾಕ್ 3.0 ಜಾರಿಯಾಗಿದೆ. ಆದರೆ, ಕೋವಿಡ್ನಿಂದಾಗಿ ಅನೇಕ ಸಾವು ನೋವುಗಳಾದರೂ ಕೂಡ ಇಲ್ಲಿನ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಮೈಮರೆತಿದ್ದಾರೆ.
ರಾಜಧಾನಿಯ ಯಶವಂತಪುರ, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಮಾರ್ಕೆಟ್ನಲ್ಲಿ ಜನರ ದೊಡ್ಡ ಗುಂಪು ಕಂಡುಬಂತು. ರಸ್ತೆಬದಿ ವ್ಯಾಪಾರ ಕೂಡ ಬಲು ಜೋರಾಗಿದ್ದು, ನಿಯಮ ಮೀರಿ ಖರೀದಿಗೆ ಜನರು ಮುಂದಾಗಿದ್ದರು. ಒಟ್ಟಿನಲ್ಲಿ ಕೊರೊನಾಗೆ ಬೆಂಗಳೂರು ಜನರು ಡೋಂಟ್ ಕೇರ್ ಎನ್ನುತ್ತಿರುವುದು ವಿಪರ್ಯಾಸವೇ ಸರಿ.
ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ: ಪ್ರಯಾಣಿಕರು ಮಾತ್ರ ವಿರಳ
ಅನ್ಲಾಕ್ 3.0 ಜಾರಿಯಾಗಿದ್ದು, ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಇಂದಿನಿಂದ ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. 100 ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.